ಪುತ್ತೂರು:ರೋಟರಿ ಕ್ಲಬ್ ಪುತ್ತೂರು,ಎ.ಬಿ ಶೆಟ್ಟಿ ದಂತ ವೈದ್ಯಕೀಯ ಮಹಾವಿದ್ಯಾಲಯ,ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ, ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆ, ಭಾರತೀಯ ದಂತ ವೈದಕೀಯ ಸಂಘ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರವು ಒಕ್ಕಲಿಗ ಗೌಡ ಸಭಾಭವನದಲ್ಲಿ ಮಾ.24ರಂದು ನಡೆಯಿತು.
ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದ ಪಿಡಿಜಿ ಡಾ.ಭಾಸ್ಕರ್ ರಾವ್ ಮಾತನಾಡಿ”ರೋಟರಿ ಸಂಸ್ಥೆಯು ತನ್ನ ಸದಸ್ಯರ ಮೂಲಕ ಸಮಾಜ ಸೇವೆ ಮಾಡುತ್ತಿರುವ ಅಂತರರಾಷ್ಟ್ರೀಯ ಸಂಸ್ಥೆ. ಒಬ್ಬರಿಂದ ಸಮಾಜಕ್ಕೆ ಸಹಾಯ ಮಾಡುವುದು ಅಸಾಧ್ಯ ಆದ್ದರಿಂದ ಎಲ್ಲರೂ ಒಟ್ಟು ಸೇರಿ ಸಮಾಜಕ್ಕೆ ದೊಡ್ಡ ಮಟ್ಟಿನ ಕೊಡುಗೆಗಳನ್ನು ನೀಡುವ ಕಾರ್ಯ ರೋಟರಿಯಿಂದ ನಡೆಯುತ್ತಿದೆ. ಪುತ್ತೂರು ರೋಟರಿ ಕ್ಲಬ್ ನಲ್ಲೂ ಈ ರೀತಿಯ ಅನೇಕ ಕಾರ್ಯಗಳು ನಡೆದಿರುವುದು ಶ್ಲಾಘನೀಯ” ಎಂದು ಹೇಳಿದರು.
ಡಿ.ಆರ್.ಎಫ್.ಸಿ ಡಾ.ಸೂರ್ಯನಾರಾಯಣ ಮಾತನಾಡಿ “ಜನರಲ್ಲಿ ರೋಟರಿಗೆ ಹೊರಗಡೆಯಿಂದ ಹಣ ಬರುತ್ತದೆ ಅದರಲ್ಲಿ ಅವರು ಸೇವಾ ಕಾರ್ಯ ಮಾಡುತ್ತಾರೆಂಬ ತಪ್ಪು ಕಲ್ಪನೆಯಿದೆ. ರೋಟರಿಯಲ್ಲಿ ಅಲ್ಲಿನ ಸದಸ್ಯರೇ ಹಣ ಹಾಕಿ ಸಮಾಜ ಸೇವೆಯನ್ನು ಮಾಡುವ ಮಾದರಿ ಕಾರ್ಯ ಮಾಡುತ್ತಿದ್ದಾರೆ”ಎಂದು ಹೇಳಿದರು.
ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಮಧು ಎಸ್.ನರಿಯೂರು ಮಾತನಾಡಿ” ಉಚಿತ ದಂತ ಪಂಕ್ತಿ ಜೋಡಣಾ ಶಿಬಿರದಲ್ಲಿ ಒಟ್ಟು ಮೂವತ್ತೈದು ಜನರಿಗೆ ದಂತ ಪಂಕ್ತಿ ಜೋಡಿಸಲಾಗಿದೆ. ಎರಡು ವರ್ಷದ ಹಿಂದೆಯೂ ಎ.ಬಿ ಶೆಟ್ಟಿ ಕಾಲೇಜಿನ ಸಹಕಾರದಲ್ಲಿ ಸುಮಾರು 50ರಷ್ಟು ಜನರಿಗೆ ದಂತ ಪಂಕ್ತಿ ಜೋಡಣಾ ಕಾರ್ಯ ನಡೆದಿತ್ತು. ನಮ್ಮ ಸಮಾಜಮುಖಿ ಕಾರ್ಯಗಳಿಗೆ ಸದಾ ಬೆಂಬಲವಾಗಿರುವ ಎ.ಬಿ ಶೆಟ್ಟಿ ವೈದ್ಯಕೀಯ ಕಾಲೇಜಿಗೆ ಹಾಗೂ ಪೂರಕ ವ್ಯವಸ್ಥೆಗಳನ್ನು ಮಾಡಿಕೊಟ್ಟ ಗೌಡ ಸಮುದಾಯ ಭವನಕ್ಕೆ ಧನ್ಯವಾದಗಳು. ಈಗಾಗಲೇ ರೋಟರಿ ಮೂಲಕ ಜನರಿಗೆ ಉಚಿತ ರಕ್ತ ನೀಡುವುದು, ನ್ಯೂಟ್ರೀಶಿಯನ್ ಆಹಾರ ನೀಡುವುದು, ಡಯಾಲಿಸಿಸ್ ಸೆಂಟರ್ ವ್ಯವಸ್ಥೆಗಳು ಮಾಡಲಾಗಿದೆ. ನೂತನವಾಗಿ ಮುಂದಿನ ಮೂರು ತಿಂಗಳೊಳಗಾಗಿ ರಕ್ತ ಸಂಗ್ರಹ ವ್ಯಾನ್ ನ ವ್ಯವಸ್ಥೆ ರೋಟರಿ ವತಿಯಿಂದ ನಡೆಯುತ್ತಿದೆ. ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಎ.ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಉಪನ್ಯಾಸಕಿ ಡಾ.ಅಶ್ವಿತ ಮಾತನಾಡಿ “ಪುತ್ತೂರು ರೋಟರಿಯ ಮೂಲಕ ಉತ್ತಮ ಕಾರ್ಯ ನಡೆದಿದೆ. ಕಾಲೇಜಿನ ವಿನಯ್ ಹೆಗ್ಡೆಯವರ ಬೆಂಬಲದಿಂದ ಈ ಉತ್ತಮ ಕಾರ್ಯದಲ್ಲಿ ಪಾಲ್ಗೊಳ್ಳಲು ನಮಗೆ ಸಾಧ್ಯವಾಗಿದೆ. ಎ.ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದು ಉತ್ತಮ ಸಮಾಜ ಸೇವಾ ಕಾರ್ಯದಲ್ಲಿ ಪಾಲ್ಗೊಂಡ ತೃಪ್ತಿ ನಮಗಿದೆ” ಎಂದು ಅವರು ಹೇಳಿದರು. ವೇದಿಕೆಯಲ್ಲಿ ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರಿನ ಅಧ್ಯಕ್ಷೆ ಡಾ.ಅಮೃತ.ಕೆ, ಕ್ಲಬ್ ಸರ್ವೀಸ್ ಡೈರೆಕ್ಟರ್ ಸುನೀಲ್ ಶೆಟ್ಟಿ ಉಪಸ್ಥಿತರಿದ್ದರು. ರೋಟರಿ ಪುತ್ತೂರಿನ ಕಾರ್ಯದರ್ಶಿ ಶ್ರೀಧರ್ ಕನಜಾಲು ವಂದಿಸಿ ರೊ.ರಾಜ್ ಗೋಪಾಲ್ ಸ್ವಾಗತಿಸಿ ವಂದಿಸಿದರು.