ಸಂಜೀವಿನಿ ಒಕ್ಕೂಟದ ಆಯ್ದ ಮಹಿಳಾ ಸದಸ್ಯರಿಗೆ ನರ್ಸರಿ ಅಭಿವೃದ್ಧಿ, ನಿರ್ವಹಣೆ ತರಬೇತಿ ಕಾರ್ಯಾಗಾರ ಮಹಿಳಾ ಸಬಲೀಕರಣಕ್ಕೆ ಸಂಜೀವಿನಿ ಒಕ್ಕೂಟದ ಮೂಲಕ ಉತ್ತೇಜನ – ಇಒ ನವೀನ್ ಭಂಡಾರಿ

0

ಪುತ್ತೂರು : ಕೇಂದ್ರ ಸರಕಾರ ಎನ್‌ಆರ್‌ಎಲ್‌ಎಂ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಜೀವಿನಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹೊಸ-ಹೊಸ ಯೋಜನೆಗಳನ್ನು ತರುವ ಮೂಲಕ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುತ್ತಿದೆ. ಅದರಂತೆ ಸಂಜೀವಿನಿ ಒಕ್ಕೂಟ ಹಾಗೂ ನರೇಗಾ ಯೋಜನೆಯಡಿ ನರ್ಸರಿ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು ಪ್ರಾಯೋಗಿಕ ನೆಲೆಯಲ್ಲಿ ಆಯ್ದ ಪಂಚಾಯತ್ ಸಂಜೀವಿನಿ ಒಕ್ಕೂಟಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಪುತ್ತೂರು ಹಾಗೂ ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ ಭಂಡಾರಿ ತಿಳಿಸಿದರು. ಅವರು ಮಾ.೨೪ ರಂದು ಮಂಜಲಪಡ್ಪು ತೋಟಗಾರಿಕೆ ಇಲಾಖೆಯ ಸಭಾಭವನದಲ್ಲಿ ಪುತ್ತೂರು, ಕಡಬ ತಾಲೂಕಿನ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ & ಎನ್ ಆರ್ ಎಲ್ ಎಂ ಯೋಜನೆ ಸಹಯೋಗದಲ್ಲಿ ತೋಟಗಾರಿಕೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಗಳ ಸಹಭಾಗಿತ್ವದಲ್ಲಿ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ಆಯ್ದ ಮಹಿಳಾ ಸದಸ್ಯರಿಗೆ ನರ್ಸರಿ ಅಭಿವೃದ್ಧಿ ಹಾಗೂ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಸಂಜೀವಿನಿ ಒಕ್ಕೂಟದ ಸದಸ್ಯರು ಸ್ವಚ್ಛ ಸಂಕೀರ್ಣದ ನಿರ್ವಹಣೆಯನ್ನು ಮಾಡುತ್ತಿದ್ದು ಈಗ ನರೇಗಾ ಯೋಜನೆಯಡಿ ವಿವಿಧ ತೋಟಗಾರಿಕೆ, ಹಣ್ಣಿನ ಗಿಡಗಳನ್ನು ಉತ್ಪಾದಿಸಲು ತರಬೇತಿಯನ್ನು ನೀಡಲಾಗುತ್ತಿದ್ದು ಈ ಮೂಲಕ ಸಂಜೀವಿನಿ ಒಕ್ಕೂಟಗಳ ಆರ್ಥಿಕ ಬಲವರ್ಧನೆಯನ್ನು ಮಾಡಲಾಗುತ್ತಿದೆ ಎಂದರು. ಪುತ್ತೂರು ಹಿರಿಯ ತೋಟಗಾರಿಕಾ ನಿರ್ದೇಶಕರಾದ ರೇಖಾ ಎ. ಮಾತನಾಡಿ, ತೋಟಗಾರಿಕಾ ಇಲಾಖೆಯು ಅಡಿಕೆ, ಕಾಳುಮೆಣಸು, ಗೇರು ಹೀಗೆ ವಿವಿಧ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಯನ್ನು ಇಲ್ಲೇ ಮಾಡುತ್ತಿದ್ದು ಇಂದು ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ನರ್ಸರಿ ಅಭಿವೃದ್ಧಿಯ ಕುರಿತು ಪ್ರಾಯೋಗಿಕವಾಗಿ ತಿಳಿಸಲು ಸಹಕಾರಿಯಾಗಿದೆ. ಮುಂದಕ್ಕೆ ಎಲ್ಲಾ ಗ್ರಾಮ ಮಟ್ಟದಲ್ಲಿ ನರ್ಸರಿ ಅಭಿವೃದ್ಧಿಯಾಗುವಂತಾಗಲು ಇಲಾಖೆಯ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು. ಪುತ್ತೂರು ತಾಲೂಕು (ಗ್ರಾ.ಉ.) ಸಹಾಯಕ ನಿರ್ದೇಶಕಿ ಶೈಲಜಾ ಭಟ್ ಮಾತನಾಡಿ, ಸಂಜೀವಿನಿ ಒಕ್ಕೂಟ ಹಾಗೂ ನರೇಗಾ ಯೋಜನೆಯ ಒಗ್ಗೂಡಿಸುವಿಕೆ ಯೊಂದಿಗೆ ಅಭಿವೃದ್ಧಿ ಮತ್ತು ನಿರ್ವಹಣೆ ಕುರಿತು ಕಾರ್ಯಾಗಾರ ಹಮ್ಮಿಕೊಂಡಿದ್ದು ಈ ಮೂಲಕ ನರೇಗಾ ಫಲಾನುಭವಿಗಳಿಗೆ ಸ್ಥಳೀಯವಾಗಿ ತೋಟಗಾರಿಕಾ ಗಿಡಗಳು ಲಭ್ಯವಾಗಬೇಕೆಂಬ ಉದ್ದೇಶವನ್ನು ಹೊಂದಲಾಗಿದೆ ಎಂದು ಹೇಳಿದರು.

ಪಿಪಿಟಿ ಮೂಲಕ ತರಬೇತಿ ಕಾರ್ಯಾಗಾರ : ಪುತ್ತೂರು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿರವರು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ನರ್ಸರಿ ನಿರ್ವಹಣೆಯ ಬಗ್ಗೆ ಅದರಲ್ಲೂ ವಿಶೇಷವಾಗಿ ಅರಣ್ಯ ಗಿಡಗಳನ್ನು ಬೆಳೆಸುವುದು ಮತ್ತು ಅದರ ಸೂಕ್ತ ನಿರ್ವಹಣೆಯನ್ನು ಮಾಡುವ ಕುರಿತು ವಿಶೇಷ ಮಾಹಿತಿಯನ್ನು ನೀಡಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿವಪ್ರಕಾಶ್ ಎಂ. ರವರು ಪಿಪಿಟಿ ಮೂಲಕ ನರ್ಸರಿ ಕಾರ್ಯಾಚರಣೆ, ಗಿಡಗಳನ್ನು ಬೆಳೆಸುವ ವಿಧಾನ, ಕಸಿ ಕಟ್ಟುವ ವಿಧಾನ, ಹೀಗೆ ವಿವಿಧ ರೀತಿಯಲ್ಲಿ ಗಿಡಗಳನ್ನು ಅಭಿವೃದ್ಧಿಪಡಿಸುವ ಕುರಿತು ಮಾಹಿತಿ ನೀಡಿದರು. ಬಳಿಕ ಪ್ರಾಯೋಗಿಕವಾಗಿ ನರ್ಸರಿ ಮಾಡುವ ಕುರಿತು ಉಪಯುಕ್ತ ಮಾಹಿತಿ ನೀಡಿದರು.

ಕಡಬ ತಾಲೂಕು (ಗ್ರಾ.ಉ.)ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ವೇದಿಕೆಯಲ್ಲಿದ್ದರು. ಎನ್.ಆರ್.ಎಲ್.ಎಂ.ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ. ಸ್ವಾಗತಿಸಿದರು. ಪುತ್ತೂರು ತಾಲೂಕಿನ ನೆಕ್ಕಿಲಾಡಿ, ನೆಟ್ಟಣಿಗೆ ಮುಡ್ನೂರು, ನಿಡ್ಪಳ್ಳಿ ಹಾಗೂ ಕಡಬ ತಾಲೂಕಿನ ಐತ್ತೂರು, ರಾಮಕುಂಜ ಗ್ರಾ.ಪಂ. ಸಂಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಿದರು. ನರೇಗಾ ತಾಂತ್ರಿಕ ಸಂಯೋಜಕರಾದ ಪ್ರಶಾಂತಿ, ಸವಿತಾ, ತಾಂತ್ರಿಕ ಸಹಾಯಕರಾದ ಹೃತೀಕ್, ಆಕಾಂಕ್ಷಾ, ವರ್ಷಾ, ಐಇಸಿ ಸಂಯೋಜಕ ಭರತ್‌ರಾಜ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here