- ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಅಲ್ಲಾಹು ಮೆಚ್ಚುವ ಸೇವೆ-ನಝೀರ್ ಅಝ್ಹರಿ
- ದಾನಿಗಳ ಸಹಾಯ ಪಡೆದುಕೊಂಡು ಸೇವೆ-ಶಬ್ಬೀರ್ ಕೆಂಪಿ
ಉಪ್ಪಿನಂಗಡಿ: ಅನಾರೋಗ್ಯ ಪೀಡಿತರಾಗಿರುವರಿಗೆ ಆರೋಗ್ಯ ಸೇವೆ, ಅನಾಥರಿಗೆ, ಅಸಹಾಯಕರಿಗೆ ಹೊಟ್ಟೆಗೆ, ಬಟ್ಟೆಗೆ ಸಹಾಯ ಮಾಡುವುದು, ಅವರ ಸಂಕಷ್ಟದಲ್ಲಿ ಭಾಗಿಯಾಗುವುದು ಅಲ್ಲಾಹು ಮೆಚ್ಚುವ ಸೇವೆಯಾಗಿದೆ. ಈ ರೀತಿಯಾಗಿ ಕೊಡುವವರಿಗೆ ಅಲ್ಲಾಹು ಯಾವತ್ತೂ ಕಡಿಮೆ ಮಾಡಲಾರ, ಇದೊಂದು ಪುಣ್ಯದಾಯಕ ಕೆಲಸ ಎಂದು ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಮುದರ್ರಿಸ್ ನಝೀರ್ ಅಝ್ಹರಿ ಬೊಳ್ಮಿನಾರ್ ಹೇಳಿದರು.
ಅವರು ಎ. ೩ರಂದು ಉಪ್ಪಿನಂಗಡಿಯಲ್ಲಿ ಉಬಾರ್ ಡೋನರ್ಸ್ ಹೆಲ್ಪ್ಲೈನ್ ವತಿಯಿಂದ ರಂಝಾನ್ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋವಿಡ್-19 ಮಹಾಮಾರಿಯಿಂದಾಗಿ ಜನರು ಬಹಳಷ್ಟು ಸಮಸ್ಯೆ, ಸಂಕಷ್ಟಗಳನ್ನು ಎದುರಿಸಿದಾಗ ಅಂತಹವರನ್ನು ಗುರುತಿಸಿ ಆಹಾರದ ಕಿಟ್ ನೀಡುತ್ತಿರುವುದು, ಪ್ರವಾಹ ಪೀಡಿತ ಸಂದರ್ಭದಲ್ಲಿ ಸಹಕಾರ, ಮನೆ ನಿರ್ಮಾಣಕ್ಕೆ ಸಹಕಾರ ನೀಡುವ ಮೂಲಕ ಈ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಯುವಕರಲ್ಲಿ ಮಾನವೀಯತೆಯ ಪ್ರತಿಬಿಂಬವನ್ನು ಕಾಣುತ್ತಿದ್ದೇವೆ. ಈ ಯುವಕರ ಸೇವೆ, ಸಂದೇಶ ಇತರೆಡೆಗೆ ಮಾದರಿ ಆಗಲಿ ಎಂದರು.
ಉಬಾರ್ ಡೋನರ್ಸ್ ಹೆಲ್ಪ್ಲೈನ್ ಸಂಸ್ಥೆಯ ಸಂಚಾಲಕ ಶಬ್ಬೀರ್ ಕೆಂಪಿ ಮಾತನಾಡಿ ಉಪ್ಪಿನಂಗಡಿ ಪರಿಸರದ ಉದ್ಯಮಿ ದಾನಿಗಳ ಸಹಾಯ ಪಡೆದುಕೊಂಡು ಕಳೆದ 7 ವರ್ಷಗಳಿಂದ ಈ ಸಂಸ್ಥೆಯ ಮೂಲಕ ಬಡ ಕುಡುಂಬಗಳಿಗೆ ಸಹಾಯ ಮಾಡುತ್ತಿದ್ದು, ಕಳೆದ ೨ ವರ್ಷದ ಕೋವಿಡ್-19, ಲಾಕ್ಡೌನ್ ಸಂದರ್ಭದಲ್ಲಿ 5 ಹಂತದಲ್ಲಿ ಆಹಾರ ಕಿಟ್ ನೀಡಲಾಗಿತ್ತು. ಇದೀಗ ಉಪ್ಪಿನಂಗಡಿ, ಕರಾಯ, ಕುಪ್ಪೆಟ್ಟಿ, ನೆಕ್ಕಿಲಾಡಿ, ಶಾಂತಿನಗರ, ಮಠ, ಬೆದ್ರೋಡಿ, ಗೋಳಿತೊಟ್ಟು, ಪೆರಿಯಡ್ಕ, ಕೊಲ, ಗಂಡಿಬಾಗಿಲು, ಆತೂರು ಮೊದಲಾದ ಕಡೆಯಲ್ಲಿನ ಸುಮಾರು 200 ಅರ್ಹ ಕುಟುಂಬವನ್ನು ಗುರುತಿಸಿ, ಒಂದು ಕುಟುಂಬಕ್ಕೆ 1 ತಿಂಗಳಿಗೆ ಬೇಕಾದ ಆಹಾರ ಸಾಮಾಗ್ರಿಗಳನ್ನು ಅವರ ಮನೆಗೆ ತೆಗೆದುಕೊಂಡು ಹೋಗಿ ಕೊಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಕಾರ್ಯದರ್ಶಿ ಶುಕ್ರಿಯಾ ಶುಕೂರ್ ಹಾಜಿ, ಖಜಾಂಚಿ ಮುಸ್ತಫಾ, ಅಶ್ರಫ್ ಕರಾಯ, ಇಸ್ಮಾಯಿಲ್ ತಂಙಳ್, ಸಿದ್ದಿಕ್ ಕೆಂಪಿ, ಉಬಾರ್ ಡೋನರ್ಸ್ ಎಡ್ಮಿನ್ಗಳಾದ ಇಬ್ರಾಹಿಂ ಆಚಿ ಕೆಂಪಿ, ಯು.ಟಿ. ತೌಸೀಫ್, ಮುನೀರ್ ಎನ್ಮಾಡಿ, ಶುಕೂರ್ ಮೇದರಬೆಟ್ಟು, ಜಮಾಲು ಕೆಂಪಿ, ಶಬೀರ್ ನಂದಾವರ, ಮುಸ್ತಾಕ್ ಕುದ್ಲೂರು, ಅನಸ್ ದಿಲ್ದಾರ್, ರಿಯಾಝ್ ಇಂಡಿಯನ್, ಸದಸ್ಯರುಗಳಾದ ಹನೀಫ್ ಕೆನರಾ, ಲತೀಫ್ ಡ್ರೈಫಿಸ್, ಸಿನಾನ್ ಕರಾವಳಿ, ಇರ್ಷಾದ್ ಯು.ಟಿ., ಅಶ್ರಫ್ ಡಿಸೈನ್, ನಿಹಾಲ್ ಕುದ್ಲೂರ್, ಖಾದರ್ ಆದರ್ಶನಗರ, ಮುಸ್ತಫಾ ಕೊಯಿ, ಫೌಝರ್ ಯು.ಟಿ., ಜಾಯಿ, ಉಪಸ್ಥಿತರಿದ್ದರು.