ಉಪ್ಪಿನಂಗಡಿ: ಅನ್ಯಕೋಮಿನ ಜೋಡಿಯನ್ನು ಪೊಲೀಸರಿಗೊಪ್ಪಿಸಿದ ಘಟನೆಗೆ ಸಂಬಂಧಿಸಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆಂದು ಯುವಕನು ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಇಬ್ಬರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಬಂದಿಸಿದ್ಧು,ಈ ಸಂಧರ್ಭ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ರಕ್ಷಣೆಗೆ ನಿಂತಿಲ್ಲವೆಂದು ಶಾಸಕ ಸಂಜೀವ ಮಠಂದೂರು ರವರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಿನ್ನೆ ತಡರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದೆ.
ಗುಂಡ್ಯದ ಪಿರಿಬಾಗಿಲಿನ ಪೆರಾಜೆ ಎಂಬಲ್ಲಿ ಅನ್ಯಕೋಮಿನ ಜೋಡಿಗಳು ತಿರುಗಾಡಿಕೊಂಡಿದ್ದು ಈ ಸಂಧರ್ಭ ಅವರನ್ನು ಪ್ರಶ್ನಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅವರನ್ನು ಪೊಲೀಸರಿಗೊಪ್ಪಿಸಿದ್ದರು. ಬಳಿಕ ಹುಡುಗಿಯೊಂದಿಗೆ ಇದ್ದ ನಝೀರ್ ಎಂಬಾತ ತನಗೆ ಹಲ್ಲೆ ನಡೆಸಿದ್ದಾರೆಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ದೂರು ನೀಡಿದ್ದ. ಈ ಹಿನ್ನಲೆಯಲ್ಲಿ ಬಾಲಚಂದ್ರ (35ವರ್ಷ) ಹಾಗೂ ರಂಜಿತ್(31ವರ್ಷ) ಇಬ್ಬರ ಬಂಧನವಾಗಿದ್ದು ಇದರಿಂದ ಆಕ್ರೋಶಗೊಂಡ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತಾವು ಹಿಂದೂ ಧರ್ಮದ ರಕ್ಷಣೆಗಾಗಿ ಕೆಲಸಮಾಡುತ್ತಿದ್ದರೂ, ನಮಗೆ ಬಿಜೆಪಿಯ ಶಾಸಕರು ಬೆಂಬಲ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ತಡರಾತ್ರಿ ಉಪ್ಪಿನಂಗಡಿ ಆದಿತ್ಯ ಹೋಟೆಲ್ ಬಳಿ, ಬೆಂಗಳೂರಿಗೆ ತೆರಳಲು ಬಸ್ಸು ಹತ್ತುವ ವೇಳೆಗೆ ಶಾಸಕ ಸಂಜೀವ ಮಠಂದೂರುರವರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಶಾಸಕರಿಗೆ ದಿಕ್ಕಾರ ಕೂಗಿದರು.ಕೆಲಹೊತ್ತು ಸ್ಥಳದಲ್ಲಿ ಆಕ್ರೋಶದ ಸ್ಥಿತಿ ಉದ್ಭವವಾಗಿದ್ದು ಬಳಿಕ ಬಸ್ಸು ಹೊರಟಾಗ ಶಾಸಕರು ಬಸ್ಸಿನಲ್ಲಿ ಬೆಂಗಳೂರಿಗೆ ತೆರಳಿದರು ಬಳಿಕ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸ್ಥಳದಿಂದ ಚದುರಿದರು.