ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ಹಾಗೂ ಬನ್ನೂರು ಗುಂಡಿಜಾಲು ಅಂಗನವಾಡಿ ಇದರ ಜಂಟಿ ಆಶ್ರಯದ ಮೇರೆಗೆ ಏ. 8 ರಂದು ಅಂಗನವಾಡಿ ಕೇಂದ್ರ ಗುಂಡಿಜಾಲು ಇಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಆರೋಗ್ಯದ ಕುರಿತು ಮಾಹಿತಿ ಕಾರ್ಯಕ್ರಮವು ಬಾಲವಿಕಾಸ ಸಮಿತಿ ಗುಂಡಿಜಾಲು ಇದರ ಅಧ್ಯಕ್ಷರು ಹಾಗೂ ಸ.ಹಿ.ಪ್ರಾ. ಶಾಲೆ ಬೀರ್ನಹಿತ್ಲು, ಸಹಶಿಕ್ಷಕಿ ಮೋಹಿನಿಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಬನ್ನೂರಿನ ಸಮುದಾಯ ಆರೋಗ್ಯ ಅಧಿಕಾರಿ ನಾಗೇಶ್ ರವರು ಮಾತನಾಡಿ, ಇವತ್ತಿನ ವೈಜ್ಞಾನಿಕ ಯುಗದಲ್ಲಿ ನಾವೆಲ್ಲರೂ ನೆಮ್ಮದಿಯ ಜೀವನವನ್ನು ನಡೆಸಬೇಕಾದರೆ ಆರ್ಥಿಕವಾಗಿ, ಸಾಮಾಜಿಕವಾಗಿಯೂ ಅರೋಗ್ಯದ ದೃಷ್ಟಿಯಿಂದ ಹಾಗೂ ಶೈಕ್ಷಣಿಕವಾಗಿ ಬದಲಾಗಬೇಕು. ವೈಯಕ್ತಿಕ ಸ್ವಚ್ಛತೆ, ಪೌಷ್ಟಿಕ ಆಹಾರ ಸೇವನೆ, ಹಾಗೂ ಸಮುದಾಯದ ಬಗೆಗಿನ ಸ್ವಚ್ಛತೆಯ ಕುರಿತು ಮಾಹಿತಿ ನೀಡಿದರು. ಚಿಕ್ಕಪಡ್ನೂರು ಇಲ್ಲಿನ ಸಮುದಾಯ ಆರೋಗ್ಯ ಅಧಿಕಾರಿ ಸುಷ್ಮಾ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಅರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಅಂಗನವಾಡಿ ಮೇಲ್ವಿಚಾರಕರಾದ ಹರಿಣಾಕ್ಷಿರವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು. ಬನ್ನೂರು ಗ್ರಾ.ಪಂ ಸದಸ್ಯ ಶೀನಪ್ಪ ಕುಲಾಲ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯೆ ಸುಪ್ರಿತಾ.ಪಿ, ಸಂತ ಫಿಲೋಮಿನಾ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ಶ್ರೀಮಣಿ ಉಪಸ್ಥಿತರಿದ್ದರು.ಅಂಗನವಾಡಿಯ ಪುಟಾಣಿಗಳು ಪ್ರಾರ್ಥಿಸಿದರು.ಸ್ನಾತಕೋತ್ತರ ಸಮಾಜಕಾರ್ಯ ವಿದ್ಯಾರ್ಥಿಗಳಾದ ರೋಶನ್ ಸ್ವಾಗತಿಸಿ, ರವಿಕಿರಣ್ ಡಿ’ಸೋಜ ವಂದಿಸಿದರು. ಅಬ್ದುಲ್ ಬಾಸಿತ್ ಕಾರ್ಯಕ್ರಮ ನಿರ್ವಹಿಸಿದರು.