ನೆಲ್ಯಾಡಿ: ಅನಾರೋಗ್ಯದಿಂದ ಬಳಲುತ್ತಿದ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಜಾತಿಯ ಇಬ್ಬರಿಗೆ ವೈದ್ಯಕೀಯ ವೆಚ್ಚವಾಗಿ ಶಿರಾಡಿ ಗ್ರಾಮ ಪಂಚಾಯತ್ ವತಿಯಿಂದ ಧನ ಸಹಾಯ ನೀಡಲಾಯಿತು.
ಉದನೆ 1ನೇ ವಾರ್ಡ್ನ ನಿವಾಸಿ ಪರಿಶಿಷ್ಟ ಜಾತಿಯ ಕುಟುಂಬದ ಕಮಲ ಎಂಬವರು ಗರ್ಭಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದು ಅವರಿಗೆ ಚಿಕಿತ್ಸೆಗಾಗಿ ಪಂಚಾಯತ್ ವತಿಯಿಂದ ರೂ. 10 ಸಾವಿರ ಧನ ಸಹಾಯ ನೀಡಲಾಯಿತು. 3ನೇ ವಾರ್ಡಿನ ಪೆರುಮಜಲ್ ನಿವಾಸಿ ಪರಿಶಿಷ್ಟ ಜಾತಿಯ ವಸಂತ ಎಂಬವರು ಆಕಸ್ಮಿಕವಾಗಿ ಮರದಿಂದ ಬಿದ್ದು ಕಾಲು ನೋವಿನಿಂದ ಬಳಲುತ್ತಿದ್ದು ಅವರಿಗೆ ಚಿಕಿತ್ಸೆಗಾಗಿ ಪಂಚಾಯತ್ ವತಿಯಿಂದ 7 ಸಾವಿರ ರೂ., ಧನಸಹಾಯವನ್ನು ನೀಡಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನೀತಾ ತಂಗಚ್ಚನ್, ಉಪಾಧ್ಯಕ್ಷ ಕಾರ್ತಿಕೇಯನ್, ಸದಸ್ಯರಾದ ಸನ್ನಿ ಜಾನ್, ಲಕ್ಷ್ಮಣ ಗೌಡ ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿ ಪಿ.ವೆಂಕಟೇಶ್ರವರು ಧನ ಸಹಾಯ ಹಸ್ತಾಂತರಿಸಿದರು.