ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಮಟ್ಟದ ವಿಜ್ಞಾನ ಶಿಬಿರ ಯುರೇಕಾ-2022

0

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ 12  ದಿನಗಳ ರಾಜ್ಯಮಟ್ಟದ ವಿಜ್ಞಾನ ಶಿಬಿರ ಯುರೇಕಾ-2022ರ ನಾಲ್ಕನೇ ದಿನದ ಕಾರ್ಯಕ್ರಮ ನೆರವೇರಿತು.

ನಾಲ್ಕನೇ ದಿನದ ಮೊದಲ ಅವಧಿಯನ್ನು ಇಂದ್ರಪ್ರಸ್ಥ ಕಾಲೇಜಿನ ಪ್ರಾಂಶುಪಾಲರಾದ ಹೆಚ್. ಕೆ. ಪ್ರಕಾಶ್ ನಡೆಸಿಕೊಟ್ಟು ಮಾತನಾಡಿ ಅವರು ಪ್ರಕೃತಿಯಲ್ಲಿರುವ ಹಲವು ಜೀವರಾಶಿಗಳು, ಅವುಗಳ ಬದುಕು, ಪ್ರಕೃತಿಗೆ ಆ ಜೀವಿಗಳ ಕೊಡುಗೆ, ಮಾನವ ಹಾಗೂ ಜೀವ ಸಂಕುಲದ ಕೊಂಡಿ ಹೇಗೆ ಇರಬೇಕು, ಪರಿಸರದಲ್ಲಿ ಈ ಜೀವಿಗಳ ಅವಶ್ಯಕತೆ ಎಷ್ಟಿವೆ, ಅವುಗಳ ಬಗ್ಗೆ ನಾವೆಷ್ಟು ಅರಿತುಕೊಂಡಿದ್ದೇವೆ ಇತ್ಯಾದಿ ವಿಷಯಗಳ ಕುರಿತು ಮಾತನಾಡುತ್ತಾ ಈ ಜೀವಸಂಕುಲದ ಕುರಿತು ಸಂಪೂರ್ಣವಾಗಿ ಅರಿಯಬೇಕಾದರೆ ಜೀವಶಾಸ್ತ್ರದ ಅಧ್ಯಯನ ಅವಶ್ಯಕ ಎಂದರು. ಜೀವಶಾಸ್ತ್ರದ ವಿಸ್ಮಯಗಳು, ವಿಷಯದ ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಎರಡನೇ ಅವಧಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಣಿತಶಾಸ್ತ್ರದ ಜಟಿಲ ಸಮಸ್ಯೆಗಳನ್ನು ಅಲ್ಪಸಮಯದಲ್ಲಿ ಹೇಗೆ ಪರಿಹರಿಸಬಹುದು ಎನ್ನುವುದನ್ನು ಪ್ರಾತ್ಯಕ್ಷಿಕೆಗಳ ಮೂಲಕ ಗಣಿತಶಾಸ್ತ್ರದ ಪರಿಣಿತ ಉಪನ್ಯಾಸಕಿ ಕವಿತಾ ವಿದ್ಯಾರ್ಥಿಗಳಿಗೆ ತಿಳಿಸಿದರು. ಕೊನೆಯ ಅವಧಿಯಲ್ಲಿ ಜೀವಶಾಸ್ತ್ರದ ಉಪನ್ಯಾಸಕಿ ಡಾ.ಶ್ರುತಿ ಇವರು ಪ್ರಾಣಿ ಜಗತ್ತಿನ ವೈವಿಧ್ಯತೆ ವಿಷಯದ ಬಗ್ಗೆ ಸಂವಾದ ನಡೆಸಿದರು. ಈ ಶಿಬಿರ 12 ದಿನಗಳ ಕಾಲ ನಡೆಯಲಿದ್ದು ರಾಜ್ಯದ ವಿವಿಧ ಭಾಗಗಳಿಂದ ಸುಮಾರು ನೂರು ಶಿಬಿರಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here