ನೆಲ್ಯಾಡಿ: ಉದನೆ ತೂಗುಸೇತುವೆ ಸಮೀಪ ಗುಂಡ್ಯ ಹೊಳೆಯಲ್ಲಿ ನೂರಾರು ಮೀನುಗಳು ಸತ್ತುಬಿದ್ದಿದ್ದು ಇದಕ್ಕೆ ಕಾರಣರಾದ ಆಂಧ್ರ ಮೂಲದ ಮೂವರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಉದನೆ ತೂಗು ಸೇತುವೆ ಸಮೀಪ ಗುಂಡ್ಯ ಹೊಳೆಯಲ್ಲಿ ನೂರಾರು ಮೀನುಗಳು ಸತ್ತು ಬಿದ್ದಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನೀರಿಗೆ ತೋಟೆ ಹಾಕಿರುವುದರಿಂದಲೇ ಮೀನುಗಳು ಸತ್ತಿರಬಹುದೆಂದು ಸ್ಥಳೀಯರು ಗುಮಾನಿ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ನೆಲ್ಯಾಡಿ ಹೊರ ಠಾಣೆ ಪೊಲೀಸರು ಉದನೆಯ ಕಳಪಾರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯ ಕೆಲಸಕ್ಕೆ ಬಂದಿದ್ದ ಆಂಧ್ರ ಮೂಲದ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇವರು ಬ್ಯಾಟರಿ ಬಳಸಿ ನದಿಯಲ್ಲಿ ಮೀನು ಹಿಡಿಯಲು ಮುಂದಾಗಿದ್ದರು ಎಂದು ಹೇಳಲಾಗಿದೆ.