![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
- ಪುಣ್ಚಪ್ಪಾಡಿ ಶಾಲೆಯಲ್ಲಿ ವಿಭಿನ್ನ ಶಾಲಾ ಪ್ರಾರಂಭೋತ್ಸವ
- ಸರ್ವರಿಗೂ ಶಿಕ್ಷಣ ಸಿಗುವಂತೆ ಮಾಡುವುದೇ ನಮ್ಮ ಜವಾಬ್ದಾರಿ – ಭಾಸ್ಕರ ಕೋಡಿಂಬಾಳ
ಪುತ್ತೂರು : ಸರ್ವರಿಗೂ ಶಿಕ್ಷಣ ಸಿಗುವಂತೆ ಮಾಡುವುದೇ ನಮ್ಮ ಜವಾಬ್ದಾರಿ ಎಂದು ರೋಟರಿ ಸ್ವರ್ಣ ಪುತ್ತೂರಿನ ಅಧ್ಯಕ್ಷರಾದ ಭಾಸ್ಕರ ಕೋಡಿಂಬಾಳ ಹೇಳಿದರು. ಅವರು ಕರ್ನಾಟಕ ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು, ಸ.ಹಿ.ಪ್ರಾ ಶಾಲೆ ಪುಣ್ಚಪ್ಪಾಡಿ ಇದರ ಶಾಲಾ ಆರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ನಮ್ಮ ದೇಶದಲ್ಲಿ ಇಂದಿಗೂ ಕೂಡ ಬಹಳಷ್ಟು ಜನ ಬೇರೆ ಬೇರೆ ಕಾರಣಗಳಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪ್ರಾಥಮಿಕ ಹಂತದ ಶಿಕ್ಷಣವನ್ನು ಎಲ್ಲರಿಗೂ ಸಿಗುವಂತೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು. ಅವರು ರೋಟರಿ ಸ್ವರ್ಣ ಪುತ್ತೂರು ವತಿಯಿಂದ, ಪಿ.ಡಿ. ಕೃಷ್ಣಕುಮಾರ್ ರೈಯವರಿಂದ ಪ್ರಾಯೋಜಿತವಾದ ಶಾಲೆಗೆ ಅಗತ್ಯವಾದ ಬೆಂಚು, ಡೆಸ್ಕುಗಳ ಕೊಡುಗೆಯನ್ನು ನೀಡಿ ಕಾರ್ಯಕ್ರಮವನ್ನು ಅರ್ಥ ಪೂರ್ಣಗೊಳಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮ ಪಂಚಾಯತ್ ಸವಣೂರು ಇದರ ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ ಮಾತನಾಡಿ ಸರಕಾರಿ ಶಾಲೆಗಳು ಸರ್ವರಿಗೂ ಶಿಕ್ಷಣ ನೀಡುವಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಶಿಕ್ಷಣ ಸೌಲಭ್ಯ ಉಪಯೋಗವನ್ನು ನಾವೆಲ್ಲರೂ ಪಡೆದುಕೊಳ್ಳಬೇಕು ಎಂದರು. ರೋಟರಿ ಸ್ವರ್ಣದ ನಿಯೋಜಿತ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಮಾತನಾಡಿ ಶಾಲೆಗಳು ಕ್ರಿಯಾತ್ಮಕವಾಗಿ ತೆರೆದುಕೊಳ್ಳುತ್ತಿದೆ ಎನ್ನುವುದಕ್ಕೆ ಪುಣ್ಚಪ್ಪಾಡಿ ಶಾಲೆ ಉತ್ತಮ ನಿದರ್ಶನ ಎಂದರು. ರೋಟರಿ ಸ್ವರ್ಣ ಪುತ್ತೂರು ಇದರ ಪೂರ್ವ ಅಧ್ಯಕ್ಷರಾದ ಸೆನೋರಿಟ ಮಾತನಾಡಿ ಮಕ್ಕಳು ವಿದ್ಯೆಯನ್ನು ಪಡೆದು ಉತ್ತಮ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳಬೇಕು ಎಂದರು. ನ್ಯಾಯವಾದಿ ಮಹೇಶ್ ಕೆ. ಸವಣೂರು ಮಾತನಾಡಿ ಶಾಲಾ ಆರಂಭೋತ್ಸವ ಅತ್ಯುತ್ತಮವಾಗಿ ನಡೆದಿದ್ದು ಸರಕಾರ ಶಿಕ್ಷಣಕ್ಕೆ ಬಹಳಷ್ಟು ಖರ್ಚು ಮಾಡುತ್ತಿದೆ ಸರಕಾರದ ಜೊತೆಗೆ ನಾವು ಕೈ ಜೋಡಿಸಿದಾಗ ಶಿಕ್ಷಣದ ಯಶಸ್ಸು ಖಂಡಿತ ಸಾಧ್ಯ ಎಂದರು. ಶಾಲಾ ದಾನಿಗಳಾದ ಶ್ರೀ ಪಿ.ಡಿ.ಕೃಷ್ಣ ಕುಮಾರ್ ರೈ ಕಲಿಕಾ ಚೀಲ ವಿತರಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಗಾಯತ್ರಿ ಓಂತಿಮನೆ ಮಾತನಾಡಿ ನಾವು ನಮ್ಮ ಊರಿನ ಶಾಲೆಯನ್ನು ಉಳಿಸುವುದು ಬೆಳೆಸುವುದು ನಮ್ಮ ಆದ್ಯ ಕರ್ತವ್ಯ ಎಂದರು.
೭ ನೇ ತರಗತಿ ವಿದ್ಯಾರ್ಥಿಗಳು ಕೊಡುಗೆ ನೀಡಿದ ನಲಿಕಲಿ ಮೇಜುಗಳನ್ನು ಶಾಲಾರ್ಪಣೆ ಮಾಡಲಾಯಿತು. ಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ರಾಧಾಕೃಷ್ಣ ದೇವಸ್ಯ, ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದರು. ಶಿಕ್ಷಕರಾದ ಶೋಭಾ ಕೆ. ಸ್ವಾಗತಿಸಿ ಫ್ಲಾವಿಯಾ ವಂದಿಸಿದರು. ಮುಖ್ಯಗುರು ರಶ್ಮಿತಾ ನರಿಮೊಗರು ಕಾರ್ಯಕ್ರಮ ನಿರ್ವಹಿಸಿದರು. ಅತಿಥಿ ಶಿಕ್ಷಕರಾದ ಚಂದ್ರಿಕಾ ಎಸ್. ಸಹಕರಿಸಿದರು.
ಕಾರ್ಯಕ್ರಮದ ವಿಶೇಷತೆಗಳು:
“ಏನಿದು ಕಲಿಕಾ ಚೀಲ..?
ಶಾಲೆಯ ಪ್ರತಿ ಮಕ್ಕಳಿಗೆ ಬರೆಯುವ ಪುಸ್ತಕ ಲೇಖನ ಸಾಮಗ್ರಿಗಳನ್ನು ಒಳಗೊಂಡ ಚೀಲವೇ ಕಲಿಕಾ ಚೀಲ. ದಾನಿಗಳಾದ ಯತೀಶ್ ಕುಮಾರ್ ಕೊಂಬಕೆರೆ, ಸುಹಾಸ್ ಕಾರಂತ್ ಕಲ್ಲರ್ಪೆ , ಹರೀಶ್ ತೋಟತಡ್ಕ ಪೊಲೀಸ್ ಇಲಾಖೆರವರು ಕೊಡಮಾಡಿದ ಈ ಚೀಲವನ್ನು ಮಕ್ಕಳ ಮನೆಗೆ ತೆರಳಿ ನೀಡಿ, ಈ ಮೂಲಕ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳುವುದೇ ಕಲಿಕಾ ಚೀಲ. ಶಾಲಾ ಆವರಣದಲ್ಲಿ ತಳಿರು ತೋರಣಗಳಿಂದ ವಿಶೇಷವಾಗಿ ಅಲಂಕರಿಸಿ, ಮಕ್ಕಳನ್ನು ಆರತಿ ಬೆಳಗಿ , ಕಲಿಕಾ ಚೀಲ ನೀಡಿ ಶಾಲೆಗೆ ಸ್ವಾಗತಿಸಿ, ಕೊಡುಗೆಗಳ ಶಾಲಾರ್ಪಣೆಯ ಮೂಲಕ ಶಾಲಾ ಆರಂಭೋತ್ಸವ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.