ಕಡಬ: ವರದಿಗಾಗಿ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳನ್ನು ಹಿಜಾಬ್ ಪರ ವಿದ್ಯಾರ್ಥಿಗಳು ದಿಗ್ಬಂಧನ ವಿಧಿಸಿ ಕ್ಯಾಮರಾ ಕಸಿದುಕೊಂಡು ವೀಡಿಯೋ ಡಿಲಿಟ್ ಮಾಡಿರುವ ಘಟನೆಯನ್ನು ಖಂಡಿಸಿ ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಜೂ.2ರಂದು ಮನವಿ ಸಲ್ಲಿಸಲಾಯಿತು.
ಪುಂಡ ವಿದ್ಯಾರ್ಥಿಗಳು ಪತ್ರಕರ್ತರನ್ನು ಕೋಣೆಯೊಳಗೆ ಕೂಡಿ ಹಾಕಿ ದಿಗ್ಬಂಧನ ವಿಧಿಸಿದ್ದಾರೆ, ಅಲ್ಲದೆ ಕ್ಯಾಮರಾ ಕಸಿದು ಮಾಧ್ಯಮದವರು ಮಾಡಿರುವ ವೀಡಿಯೋಗಳನ್ನು ಡಿಲಿಟ್ ಮಾಡಿದ್ದಾರೆ. ಇದು ಪತ್ರಿಕಾ ಸ್ವಾತಂತ್ರ್ಯದ ಹರಣವಾಗಿದ್ದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಆರೋಪಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿ ತಕ್ಷಣ ಬಂಧಿಸಬೇಕು ಅನ್ಯಾಯಕ್ಕೊಳಗಾದ ಪತ್ರಕರ್ತರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಕಡಬ ತಹಸೀಲ್ದಾರ್ ಅನಂತಶಂಕರ್ ಮೂಲಕ ಮನವಿ ನೀಡಲಾಯಿತು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಕಡಬಕ್ಕೆ ಆಗಮಿಸಿದ್ದ ಡಿವೈಎಸ್ಪಿ ಡಾ. ಗಾನ ಪಿ. ಕುಮಾರ್ ಅವರಿಗೆ ಮನವಿ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ, ಕಾರ್ಯದರ್ಶಿ ವಿಜಯ ಕುಮಾರ್, ಸ್ಥಾಪಕಾಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಯಿಲ, ಪ್ರಕಾಶ್ ಕೋಡಿಂಬಾಳ, ದಿವಾಕರ ಮೊದಲಾದವರು ಉಪಸ್ಥಿತರಿದ್ದರು.