ಪುತ್ತೂರು: ಶ್ರೀ ಸಿದ್ಧಗಂಗಾ ಕ್ಷೇತ್ರದ ತ್ರಿವಿಧ ದಾಸೋಹಿ, ನಿರಂಜನ ಪ್ರಣವ ಸ್ವರೂಪಿ, ಶ್ರೀ ಶಿವಕುಮಾರ ಸ್ವಾಮಿಗಳ 115ನೇ ಜಯಂತಿಯ ಅಂಗವಾಗಿ ನೀಡಲಿರುವ ಸಿದ್ಧ ಗಂಗಾಶ್ರೀ ಸದ್ಭಾವನಾ ರಾಷ್ಟ್ರಿಯ ಪ್ರಶಸ್ತಿಗೆ ವೀರಶೈವ, ಹಿಂದು, ಜೈನ ಇತಿಹಾಸ ಸಂಸ್ಕೃತಿಯ ಸಂಶೋಧಕ, ಲೇಖಕ ಹಾಗೂ ಶಾಸನ ತಜ್ಞ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ| ವೈ ಉಮಾನಾಥ ಶೆಣೈಯವರು ಆಯ್ಕೆಯಾಗಿದ್ದಾರೆ.
ಜೂ.25ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ, ಬೆಂಗಳೂರು ಇಲ್ಲಿ ಅನೇಕ ಮಠಾಧೀಶರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ಜನತಾ ಸೇನಾದಳದ ರಾಜ್ಯಾಧ್ಯಕ್ಷ ಎಚ್. ಸದಾಶಿವ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಡಾ| ಉಮಾನಾಥ ಶೆಣೈರವರು ಪ್ರಸ್ತುತ ಪುತ್ತೂರು ಮುರ ನಿವಾಸಿಯಾಗಿದ್ದು ಈ ಹಿಂದೆ ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪ್ರಕರಾಗಿ ಕಾರ್ಯನಿರ್ವಹಿಸಿದ್ದರು. ಇವರ ಪತ್ನಿ ವಿಜಯ ಕುಮಾರಿ ಶೆಣೈಯವರು ಕೆ.ಎ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಇದೀಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.