- ಜಾಗದ ಹಕ್ಕು ಪತ್ರ ಒದಗಿಸಿಕೊಡಲು ಡಿ.ಸಿ.ಗೆ ಮನವಿ
ಪುತ್ತೂರು: ವಾಸವಾಗಿರುವ ಜಾಗದ ಹಕ್ಕು ಪತ್ರ ಒದಗಿಸಿಕೊಡುವಂತೆ ಆಗ್ರಹಿಸಿ ಬೆಳ್ಳಿಪ್ಪಾಡಿ ಗ್ರಾಮದ ಪಾದೆಕಲ್ಲು ಮತ್ತು ಜರಿಯಲ್ಲಿರುವ ಪರಿಶಿಷ್ಟ ಕಾಲೋನಿಯ ನಿವಾಸಿಗಳು ದ.ಕ. ಜಿಲ್ಲಾಧಿಕಾರಿಯವರಿಗೆ ಜೂ.29ರಂದು ಮನವಿ ಸಲ್ಲಿಸಿದ್ದಾರೆ.
ಸರ್ವೆ ನಂಬರ್ 71ರಲ್ಲಿ ಕಳೆದ ನೂರು ವರ್ಷಗಳಿಂದ 13 ಕುಟುಂಬಗಳು ಕೃಷಿ ಮತ್ತು ಕೂಲಿ ವೃತ್ತಿ ಮಾಡಿಕೊಂಡಿದ್ದೇವೆ. ಸರಕಾರದ ಭೂಮಿಯ ಒತ್ತುವರಿ ಎಂಬ ಕಾರಣ ಮುಂದಿಟ್ಟುಕೊಂಡು ಇದುವರೆಗೆ ನಮಗೆ ಹಕ್ಕು ಪತ್ರ ಕೊಟ್ಟಿಲ್ಲ. ಆದ್ದರಿಂದ ನಾವು ಸರಕಾರಿ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಇದರಿಂದಾಗಿ ಬಡವರಾದ ನಾವು ಜೀವನ ನಡೆಸಲು ಸಂಕಷ್ಟ ಅನುಭವಿಸುತ್ತಿದ್ದೇವೆ. ಈ ಬಗ್ಗೆ ಅನೇಕ ಇಲಾಖೆಗಳಿಗೆ, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಕೊಟ್ಟರೂ ಇದುವರೆಗೆ ಪ್ರಯೋಜನವಾಗಿಲ್ಲ. ಆದ್ದರಿಂದ ತಾವು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಹಕ್ಕು ಪತ್ರ ಒದಗಿಸಿಕೊಡುವುದಕ್ಕಾಗಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಹೋರಾಟ ಸಮಿತಿಯ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿಯವರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ಹೋರಾಟ ಸಮಿತಿಯ ಗೌರವಾಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲು, ಗೌರವ ಸಲಹೆಗಾರ ಜಯಪ್ರಕಾಶ್ ಬದಿನಾರು, ಅಧ್ಯಕ್ಷ ಜಗದೀಶ್ ಕಜೆ, ಫಲಾನುಭವಿಗಳಾದ ನವೀನ್, ಮಾಧವ, ನೋಣಯ್ಯ ಮತ್ತು ನಾಗೇಶ್ ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.