@ಯೂಸುಫ್ ರೆಂಜಲಾಡಿ
ಪುತ್ತೂರು: ರಸ್ತೆ ಬದಿಯ ಧರೆ ಕುಸಿದು ಮನೆ ಅಪಾಯಕಾರಿ ಸ್ಥಿತಿಯಲ್ಲಿರುವ ಈಶ್ವರಮಂಗಲ-ಸುಳ್ಯಪದವು ರಸ್ತೆಯ ಮೀನಾವುಗೆ ಕಂದಾಯ ನಿರೀಕ್ಷಕರಾದ ಗೋಪಾಲ್ ಕೆ.ಟಿ ಅವರು ಜು.೯ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸುರಕ್ಷತಾ ದೃಷ್ಟಿಯಿಂದ ವಾಸ್ತವ್ಯ ಬದಲಿಸುವಂತೆ ಮನೆಯವರಿಗೆ ಸೂಚನೆ ನೀಡಿದ್ದಾರೆ. ರಸ್ತೆಯ ಬದಿಯ ಧರೆ ಕುಸಿಯುತ್ತಿರುವುದರಿಂದ ಮತ್ತು ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮನೆಯವರು ತಾತ್ಕಾಲಿಕವಾಗಿ ಮನೆಯಲ್ಲಿ ಉಳಿದುಕೊಳ್ಳದೇ ವಾಸ್ತವ್ಯ ಬದಲಾಯಿಸುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದ ಗೋಪಾಲ್ ಕೆ.ಟಿ ಅವರು ಈ ಬಗ್ಗೆ ತಹಶೀಲ್ದಾರ್ಗೂ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ. ನೆ.ಮುಡ್ನೂರು ಗ್ರಾಮ ಕರಣಿಕರಾದ ಉಮೇಶ್ ಕಾವಡಿ ಹಾಗೂ ಗ್ರಾಮ ಸಹಾಯಕ ರಘುನಾಥ ಪಾಟಾಳಿ ಉಪಸ್ಥಿತರಿದ್ದರು. ಅಲ್ಲಿನ ಸಮಸ್ಯೆ ಬಗ್ಗೆ ತಹಶೀಲ್ದಾರ್ ಮತ್ತು ಸ್ಥಳೀಯ ಗ್ರಾ.ಪಂಗೆ ಮಾಹಿತಿ ನೀಡಲಾಗಿದೆ ಎಂದು ನೆ.ಮುಡ್ನೂರು ಗ್ರಾಮ ಕರಣಿಕರಾದ ಉಮೇಶ್ ಕಾವಡಿ ತಿಳಿಸಿದ್ದಾರೆ.
ಏನಿದು ಘಟನೆ:
ಮೀನಾವು ನಿವಾಸಿ ಸಂಶುದ್ದೀನ್ ಎಂಬವರ ಮನೆಯ ಹಿಂಭಾಗದ ಎತ್ತರದ ಧರೆಯ ಸುಮಾರು ಭಾಗ ಕುಸಿತಗೊಂಡು ಮನೆಯ ಹಿಂಭಾಗದ ಗೋಡೆಯವರೆಗೆ ಬಂದು ನಿಂತಿದೆ. ಇದೇ ಧರೆ ಕಳೆದ ವರ್ಷ ಅಲ್ಪ ಕುಸಿತಕ್ಕೊಳಗಾದ ಸಂದರ್ಭ ಸಂಶುದ್ದೀನ್ ಅವರು ರೂ.5 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿದ್ದರು. ಇದೀಗ ಮತ್ತೆ ಧರೆ ಕುಸಿದು ಬಿದ್ದ ಪರಿಣಾಮ ಕಾಂಕ್ರೀಟ್ ತಡೆಗೋಡೆ ಕೂಡಾ ನೆಲ ಸಮವಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಸಂಶುದ್ದೀನ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಈ ಮನೆಯಲ್ಲಿ ವಾಸವಾಗಿದ್ದಾರೆ.
ರಸ್ತೆ ಬದಿಯ ಧರೆ ಕುಸಿಯುತ್ತಿದ್ದು ಇದೇ ರಸ್ತೆಯಲ್ಲಿ ಬಸ್, ಲಾರಿ, ಶಾಲಾ ಬಸ್ ಸೇರಿದಂತೆ ವಿವಿಧ ಘನ ವಾಹನಗಳು ಸಂಚರಿಸುತ್ತಿದ್ದು ರಸ್ತೆಯ ಕೆಳ ಭಾಗ ಕುಸಿತಗೊಂಡಿರುವ ಕಾರಣ ರಸ್ತೆಯೇ ಕುಸಿತಗೊಳ್ಳುವ ಭೀತಿ ಕಾಡುತ್ತಿದೆ.
ಈಶ್ವರಮಂಗಲ-ಸುಳ್ಯಪದವು ರಸ್ತೆಯ ಮೀನಾವುನಲ್ಲಿ ಧರೆ ಕುಸಿದು ಅಪಾಯಕಾರಿ ಸ್ಥಿತಿಯಲ್ಲಿ ಮನೆ…!