- ಪುಣ್ಯ ಕ್ಷೇತ್ರದಲ್ಲಿ ಮಾಡಿದ ಪಾಪ ವಜ್ರಲೇಪವಾಗಿ ಉಳಿಯುತ್ತದೆ: ಮಾಣಿಲ ಶ್ರೀ
- ಕ್ಷೇತ್ರ ಹಲವಾರು ಪವಾಡಗಳಿಗೆ ಸಾಕ್ಷಿ: ಮಚ್ಚೇಂದ್ರನಾಥ ಸಾಲ್ಯಾನ್
ವಿಟ್ಲ: ಅರಿವೇ ಗುರು. ಮಕ್ಕಳಿಗೆ ತಾಯಂದಿರು ನೀಡುವ ಮಾರ್ಗದರ್ಶನ ಅವರ ಜೀವನ ರೂಪಿಸುತ್ತೇವೆ. ಧಾರ್ಮಿಕ ಕ್ಷೇತ್ರಗಳನ್ನು ಪ್ರೀತಿಸುವ ಮೂಲಕ ಹಿಂದೂ ಸಮಾಜವನ್ನು ಸುದ್ರಡಗೊಳಿಸುವ ಕೆಲಸವಾಗಬೇಕು. ಕ್ಷೇತ್ರದಲ್ಲಿ ನಡೆಯುವ ಪ್ರಾರ್ಥನೆ ವೇಳೆ ಶ್ರದ್ದಾ ಭಕ್ತಿ ನಮ್ಮಲ್ಲಿರಬೇಕು. ಪ್ರಾರ್ಥನೆ ವೇಳೆಯಲ್ಲಿ ಧನಾತ್ಮಕ ಶಕ್ತಿಯ ಉತ್ಪತ್ತಿ ಉಂಟಾಗುತ್ತದೆ. ಪುಣ್ಯ ಕ್ಷೇತ್ರದಲ್ಲಿ ಮಾಡಿದ ಪಾಪ ವಜ್ರಲೇಪವಾಗಿ ಉಳಿಯುತ್ತದೆ ಎಂದು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.
ಅವರು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಆ.5ರಂದು ನಡೆಯಲಿರುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಪ್ರಯುಕ್ತ 48ದಿನಗಳ ವರೆಗೆ ನಡೆಯಲಿರುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ 29ನೇ ದಿನವಾದ ಜು.17ರಂದು ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ನಾವು ಉಳಿಬೇಕಾದರೇ ದೇಶ ಉಳಿಯಬೇಕು. ಪರಿಶುದ್ದವಾದ ಮನಸ್ಸಿನಿಂದ ಮಣ್ಣಿನ ಅಂತಸತ್ವ ಉಳಿಸಲು ಸಾಧ್ಯ. ಬಾಲಭೋಜನದಲ್ಲಿ ಪಾಲುಪಡೆದ ಮಕ್ಕಳು ಇದೀಗ ಉನ್ನತ ಕ್ಷೇತ್ರದಲ್ಲಿದ್ದಾರೆ ಎನ್ನುವುದು ನಮಗೆ ಹೆಮ್ಮೆ ಅನಿಸುತ್ತಿದೆ. ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳೆಸದಿದ್ದರೆ ಸಮಾಜಕ್ಕೆ ಅದೊಂದು ದೊಡ್ಡ ಖಂಟಕವಾದೀತು. ಸಮಾಜದ ಏಳಿಗೆಗಾಗಿ ಕ್ಷೇತ್ರದಲ್ಲಿ ಬಹಳಷ್ಟು ಯಜ್ಞ ಯಾಗಾದಿಗಳು ನಿರಂತರವಾಗಿ ನಡೆಯುತ್ತಿದೆ. ಭಜನೆಗೆ ಅದರದೇ ಆದ ಶಕ್ತಿ ಇದೆ. ಸಮರ್ಪಣಾ ಭಾವದ ಭಕ್ತಿ ನಮ್ಮಲ್ಲಿದ್ದಾಗ ಜೀವನ ಪಾವನವಾಗುತ್ತದೆ ಎಂದರು.
ಕ್ಷೇತ್ರದ ಟ್ರಸ್ಟಿ ಮಚ್ಚೇಂದ್ರನಾಥ ಸಾಲ್ಯಾನ್ ರವರು ಮಾತನಾಡಿ ಈ ಕ್ಷೇತ್ರ ಹಲವಾರು ಪವಾಡಗಳಿಗೆ ಸಾಕ್ಷಿಯಾಗಿದೆ. ಶ್ರೀಗಳ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ. ಹಲವಾರು ಬಡಹೆಣ್ಣು ಮಕ್ಕಳಿಗೆ ವಿವಾಹ ಮಾಡಿದ ಕೀರ್ತಿ ಕ್ಷೇತ್ರಕ್ಕೆ ಸಲ್ಲುತ್ತದೆ. ಏನೂ ಇಲ್ಲದ ಕುಗ್ರಾಮವನ್ನು ಇದೀಗ ಪುಣ್ಯದ ಕ್ಷೇತ್ರವಾಗಿ ಮಾಡಿರುವುದರಲ್ಲಿ ಶ್ರೀಗಳ ಪಾತ್ರ ಅಪಾರ ಎಂದರು.
ಮಧೂರು ಮಧನಂತೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಮಂಗಳೂರಿನ ಎ.ಜೆ. ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಚೈತ್ರ ಶ್ರೀನಿವಾಸ್, ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯ ಬೆನ್ನುಮೂಳೆ ತಜ್ಞ ಡಾ.ಶ್ರೀನಿವಾಸ್, ಕ್ಷೇತ್ರ ಸಂರಕ್ಷಣಾ ಸಮಿತಿ ಉಪಾಧ್ಯಕ್ಷ ಅಪ್ಪಯ್ಯ ಮಧೂರು, ಮಧೂರು ಮದನಂತೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಮುರಳಿ ಗಟ್ಟಿ, ಬಂಟ್ವಾಳ ತಾಲೂಕು ಕುಲಾಲ ಸಂಘದ ಅಧ್ಯಕ್ಷರಾದ ನಾರಾಯಣ ಪೆರ್ನೆ, ಶ್ರೀಧಾಮ ಸೇವಾ ಸಮಿತಿ ಬೆಂಗಳೂರಿನ ಪದಾಧಿಕಾರಿ ರೋಹಿತ್ ಬಂಗೇರ ನೆಲ್ಲಿಮ್ಮಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಸಮಿತಿ ಅಧ್ಯಕ್ಷೆ ವನಿತಾ ವಿ ಶೆಟ್ಟಿ ಸ್ವಾಗತಿಸಿದರು. ದೀಕ್ಷಾ ಕಾಪಿಕ್ಕಾಡ್ ಕಾರ್ಯಕ್ರಮ ನಿರೂಪಿಸಿ, ಮಹಿಳಾ ಸಮಿತಿ ಸದಸ್ಯೆ ವಸಂತಿ ಚೌಟವಂದಿಸಿದರು.
ಬೆಳಗ್ಗೆ ಗಣಪತಿ ಹವನ, ಶ್ರೀ ವಿಠೋಭ ರುಕ್ಕಯಿ ಧ್ಯಾನ ಮಂದಿರದಲ್ಲಿ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ವಾಯನ ದಾನ, ಶ್ರೀ ಗುರು ಪೂಜೆ, ಬಾಲಭೋಜನ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆಬಳಿಕ ಸಾಮೂಹಿಕ ಕುಂಕುಮಾರ್ಚನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.