ಈಶ್ವರಮಂಗಲ: ಶ್ರೀ ಗಜಾನನ ವಿದ್ಯಾಸಂಸ್ಥೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಆ.13ರಂದು ಆಚರಿಸಲಾಯಿತು. ಸಂಸ್ಥೆಯ ಸಂಚಾಲಕರಾದ ಶಿವರಾಮ ಪಿ. ಇವರು ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಶಾಮಣ್ಣ ಹಾಗೂ ಸಂಸ್ಥೆಯ ಸಂಚಾಲಕರು ಶೋಭಾಯಾತ್ರೆಗೆ ಚಾಲನೆ ನೀಡಿ ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇಶವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂಬ ಸಂದೇಶ ನೀಡಿದರು. ಶ್ರೀ ಗಜಾನನ ಆಂಗ್ಲ ಮಾಧ್ಯಮ ಮತ್ತು ಶ್ರೀ ಗಜಾನನ ಕನ್ನಡ ಮಾಧ್ಯಮ ಶಾಲೆಯಿಂದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಶೋಭಾಯಾತ್ರೆಯು ನಡೆದಿದ್ದು ಸಂಸ್ಥೆಯ ಒಟ್ಟು 942 ವಿದ್ಯಾರ್ಥಿಗಳು ಶೋಭಾಯಾತ್ರೆ ನಡೆಸಿದರು. ಶೋಭಾಯಾತ್ರೆಯು ಶಾಲಾ ಆವರಣದಿಂದ ಈಶ್ವರಮಂಗಲ ಪೇಟೆಯುದ್ದಕ್ಕೆ ಗ್ರಾಮ ಪಂಚಾಯತ್ ತನಕ ತೆರಳಿ ಈಶ್ವರಮಂಗಲ ಉನ್ನಿಕೃಷ್ಣನ್ ವೃತ್ತದವರೆಗೂ ಮೆರವಣಿಗೆ ನಡೆಸಲಾಯಿತು. ವಿವಿಧ ಸ್ತಭ್ದ ಚಿತ್ರಗಳು, ಚೆಂಡೆ ಮತ್ತು ಘೋಷಣೆ, ತ್ರಿವರ್ಣ ಧ್ವಜಗಳೊಂದಿಗೆ ಮೆರವಣಿಗೆಯು ಸಾಗಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ನಾಗಪ್ಪ ಬೊಮ್ಮೆಟ್ಟಿ, ಶಿವರಾಮ ಭಟ್, ನಿವೃತ್ತ ಮುಖ್ಯೋಪಾಧ್ಯಾಯರಾದ ಶಿವರಾಮ ಶರ್ಮ, ಆನಂದ ಗೌಡ, ಗ್ರಾ.ಪಂ. ಅಧ್ಯಕ್ಷರಾದ ರಮೇಶ್ ರೈ ಸಾಂತ್ಯ, ಪೋಷಕರು, ಈಶ್ವರಮಂಗಲ ಆರಕ್ಷಕ ಠಾಣೆಯ ಆರಕ್ಷಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಈಶ್ವರಮಂಗಲ ಆಟೋ ರಿಕ್ಷಾ ಚಾಲಕ ಮಾಲಕರಿಂದ ಮತ್ತು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ವತಿಯಿಂದ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.