![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು; ಕಳೆದ ಎರಡು ದಿನಗಳಿಂದ ಕುಂಬ್ರದ ಕೊಯಿಲತ್ತಡ್ಕದ ರಸ್ತೆ ಬದಿಯಲ್ಲಿ ನಡೆಯಲು ಸಾಧ್ಯವಾಗದೆ ನಿತ್ರಾಣಗೊಂಡು ರಸ್ತೆ ಬದಿಯಲ್ಲಿ ಅನಾಥಸ್ಥಿತಿಯಲ್ಲಿದ್ದ ಸುಳ್ಯ ನಿವಾಸಿ ವಯೋವೃದ್ದರೋರ್ವರನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡುವ ಮೂಲಕ ಪತ್ರಕರ್ತ ಸಿದ್ದಿಕ್ ಕುಂಬ್ರ ಅವರು ಮಾನವೀಯತೆ ಮೆರೆದಿದ್ದಾರೆ.
ಸುಳ್ಯ ಗಾಂಧಿನಗರ ನಿವಾಸಿ ಎನ್ನಲಾದ ವೃದ್ದ ವೆಂಕಟ್ರಮಣ ಆಚಾರಿ (85) ರವರು ಕಳೆದ ಎರಡು ದಿನಗಳಿಂದ ಕೊಯಿಲತ್ತಡ್ಕ , ಪರ್ಪುಂಜ, ಸಂಟ್ಯಾರು ಪರಿಸರದಲ್ಲಿ ಇದ್ದರು. ಶನಿವಾರ ಬೆಳಿಗ್ಗೆ ಕುಂಬ್ರ ಪೆಟ್ರೋಲ್ ಪಂಪ್ ಬಳಿ ನಡೆದಾಡಲು ಸಾಧ್ಯವಾಗದೆ ರಸ್ತೆ ಬದಿಯಲ್ಲಿ ಬಿದ್ದಿದ್ದರು. ಇವರನ್ನು ಕಂಡ ಸಿದ್ದಿಕ್ ಕುಂಬ್ರರವರ ಅವರನ್ನು ಉಪಚರಿಸಿ ಬಳಿಕ 112 ತುರ್ತು ಸೇವಾ ಕೇಂದ್ರಕ್ಕೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ವೃದ್ದರನ್ನು ಉಪಚರಿಸಿದಾಗ ಅವರ ಪೂರ್ಣ ವಿಳಾಸ ಪತ್ತೆಯಾಗಲಿಲ್ಲ. ನಿತ್ರಾಣಗೊಂಡ ವೃದ್ದ ಮಾತನಾಡುವ ಸ್ಥಿತಿಯಲ್ಲೂ ಇರಲಿಲ್ಲ. ಸ್ಥಳಕ್ಕೆ ಬಂದ ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಕುಮಾರ್ ರೈ ಪಾಂಬಾರು ಸುಳ್ಯ ಗಾಂಧಿನಗರ ಪರಿಸರಕ್ಕೆ ಕರೆ ಮಾಡಿ ವೃದ್ದರ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. ಕೊನೆಗೆ ಪೊಲೀಸರು ಮತ್ತು ಸಾರ್ವಜನಿಕರು ಸೇರಿ ಸುಳ್ಯಕ್ಕೆ ಕೆಎಸ್ಆರ್ಟಿಸಿ ಬಸ್ಸಿನ ಮೂಲಕ ಕಳುಹಿಸಿಕೊಟ್ಟರು. ಸುಳ್ಯ ಪೊಲೀಸರಿಗೆ ಸ್ಥಳಕ್ಕೆ ಬಂದಿರುವ ಪೊಲೀಸರೇ ಮಾಹಿತಿ ನೀಡಿ ಅಲ್ಲಿಂದ ಅವರನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ವೃದ್ದ ಇಲ್ಲಿಗೆ ಹೇಗೆ ಬಂದಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಬೆಟ್ಟಂಪಾಡಿಯ ಕಕ್ಕೂರಿನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದಾಗಿಯೂ ಅವರು ಅಲ್ಲಿ ಇಲ್ಲದ ಕಾರಣ ಮರಳಿ ಬಂದಿರುವುದಾಗಿಯೂ ಹೇಳುತ್ತಿರುವ ವೃದ್ದ ತನಗೆ ಯಾರೂ ಇಲ್ಲ ಎಂದು ಹೇಳುತ್ತಿದ್ದರು. ಕುಂಬ್ರ ವಿಶಾಲ್ ಎಂಟರ್ ಪ್ರೈಸಸ್ ಮಾಲಕರಾದ ಲಕ್ಷ್ಮೀ ನಾರಾಯಣ ಮಯ್ಯರವರು ಬಸ್ ಟಿಕೆಟ್ ಹಣ ನೀಡಿ ಮಾನವೀಯತೆ ಮೆರೆದರು. ಪೊಲೀಸ್ ಸಿಬಂದಿಗಳಾದ ಸಂತೋಷ್ಕುಮಾರ್ ಮತ್ತು ನವೀನ್ ಕುಮಾರ್ ಸ್ಪಂದನೆಗೆ ಶ್ಲಾಘನೆಯೂ ವ್ಯಕ್ತವಾಯಿತು.