ಒಡಿಯೂರಿನಲ್ಲಿ ಶರದೃತು ಸಂಸ್ಕಾರ ಶಿಬಿರದ ಸಮಾರೋಪ

0

ಉತ್ತಮ ಸಂಸ್ಕಾರ ಸಿಕ್ಕಾಗ ಮಾತ್ರ ಒಳ್ಳೆಯ ವ್ಯಕ್ತಿತ್ವ ಬೆಳೆಯಲು ಸಾಧ್ಯ: ಒಡಿಯೂರು ಶ್ರೀ

ವಿಟ್ಲ: ನಾವು ನಮ್ಮನ್ನು ಬೆಳೆಸಿಕೊಳ್ಳುವ ರೀತಿ-ನೀತಿಗಳಲ್ಲಿ ಬದಲಾವಣೆ ಬೇಕಾಗಿದೆ. ವ್ಯಕ್ತಿಗೆ ಉತ್ತಮ ಸಂಸ್ಕಾರ ಸಿಕ್ಕಾಗ ಮಾತ್ರ ಒಳ್ಳೆಯ ವ್ಯಕ್ತಿತ್ವ ಬೆಳೆಯಲು ಸಾಧ್ಯ. ಇನ್ನೊಬ್ಬರಿಗೆ ಸಹಾಯ ಮಾಡುತ್ತಾ ಬದುಕುವುದು ಭಗವಂತನಿಗೆ ಪ್ರಿಯವಾಗುವುದು. ಮಾನವೀಯತೆ ಬೆಳೆದಾಗ ಮಾತ್ರ ಮನುಷ್ಯ ಮಾನವನಾಗುತ್ತಾನೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠವು ಆಯೋಜಿಸಿದ ಶರದೃತು ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಪ್ರಮಾಣಪತ್ರ ವಿತರಿಸಿ ಆಶೀರ್ವಚನ ನೀಡಿದರು.

ಸಾಧ್ವಿ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ ಪೂಜ್ಯ ಶ್ರೀಗಳವರ ಆಶಯದಂತೆ ಸುಮಾರು ವರ್ಷಗಳಿಂದ ಈ ಶಿಬಿರ ನಡೆಯುತ್ತಾ ಬಂದಿದೆ. ವ್ಯಕ್ತಿತ್ವ ವಿಕಸನಕ್ಕೆ ಸಂಸ್ಕಾರವೇ ತಳಪಾಯ. ಈ ನಿಟ್ಟಿನಲ್ಲಿ ಈ ಶಿಬಿರ ಪೂರಕವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶಿವಗಿರಿ ಕಲ್ಲಡ್ಕರವರು ಮಾತನಾಡಿ ತನ್ನ ಬಾಲ್ಯ ಸಮಯದ ಅನುಭವದ ತುಣುಕುಗಳನ್ನು ಶಿಬಿರಾರ್ಥಿಗಳ ಮುಂದಿಟ್ಟರು. ಮೈತ್ರೇಯಿ ಗುರುಕುಲದ ಭಗಿನಿ ರಾಜೇಶ್ವರೀ ಭಟ್ ಶುಭಹಾರೈಸಿ ಭಾರತೀಯ ಪರಂಪರೆಯಲ್ಲಿ ಗುರು ಮತ್ತು ಗುರಿ ಅತ್ಯಂತ ಮಹತ್ವವಾದದ್ದು. ಪರಮಗುರಿ ಸಂಸ್ಕಾರವಂತರಿಗೆ ಮಾತ್ರ ದೊರಕುವುದು. ಶಿಬಿರದಲ್ಲಿ ಸಿಕ್ಕಂತಹ ಸಂಸ್ಕಾರವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಬದಲಾವಣೆ ಸಾಧ್ಯ ಎಂದರು.

ವೇದಿಕೆಯಲ್ಲಿ ಮೈತ್ರೇಯಿ ಗುರುಕುಲದ ಪಾರ್ವತಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ರೇಣುಕಾ ಎಸ್.ರೈ ಸ್ವಾಗತಿಸಿ, ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ, ಶಿಬಿರಾರ್ಥಿಗಳಾದ ಸಾನಿಧ್ಯ ಪಕಳ ಮತ್ತು ಚಿನ್ಮಯ್ ಉಪಸ್ಥಿತರಿದ್ದರು.

ಸಾಮೂಹಿಕ ಶಿಬಿರಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ೯ನೇ ತರಗತಿಯ ಶ್ರೀಜಿತ್ ಸ್ವಾಗತಿಸಿ, ವಿದ್ಯಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು, ೮ನೇ ತರಗತಿಯ ಶರಣ್ಯ ವಂದಿಸಿದರು. ಶಿಬಿರಾರ್ಥಿಗಳಿಂದ ಯೋಗಗುಚ್ಛ, ಸಂಸ್ಕೃತ ಸಂಭಾಷಣೆ, ಒನಕೆ ಓಬವ್ವ ಅಣುಕು ಪ್ರದರ್ಶನ, ‘ಕಂಸವಧೆ’ ಯಕ್ಷಗಾನ ತಾಳಮದ್ದಳೆ ಜರಗಿತು.

LEAVE A REPLY

Please enter your comment!
Please enter your name here