




ಮೀನ ಸಂಕ್ರಮಣದ ದಿನ ಸೂರ್ಯ ರಶ್ಮಿ ಸ್ಪರ್ಶಿಸುವ ರಾಜ್ಯದ ಏಕೈಕ ಕ್ಷೇತ್ರ
ಪುತ್ತೂರು: ಪ್ರತಿ ವರ್ಷ ಮೀನ ಸಂಕ್ರಮಣದಂದು ವಿಶೇಷವಾಗಿ ಮುಂಜಾನೆಯ ವೇಳೆಗೆ ಸೂರ್ಯನ ರಶ್ಮಿಯು ದೇವಿಯ ಬಿಂಬಕ್ಕೆ ಸ್ಪರ್ಶಿಸುತ್ತಿರುವ ರಾಜ್ಯದ ಏಕೈಕ ದೇವಸ್ಥಾನ ಎಂದು ಪ್ರಸಿದ್ಧಿ ಪಡೆದಿರುವ, ಇಲ್ಲಿನ ರೈಲು ನಿಲ್ದಾಣದ ಬಳಿಯ ಕಾರಣಿಕ ಕ್ಷೇತ್ರ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಿಯ ಬಿಂಬಕ್ಕೆ ಮಾ.14ರ ಮೀನ ಸಂಕ್ರಮಣದಂದು ಮುಂಜಾನೆ ಸೂರ್ಯ ರಶ್ಮಿಯ ಸ್ಪರ್ಶವಾಯಿತು.




ಪ್ರಾತಃಕಾಲ ಶ್ರೀಮಹಾಲಿಂಗೇಶ್ವರ ಭಜಕ ವೃಂದದವರಿಂದ ಭಜನೆ, ಶ್ರೀಕೃಷ್ಣ ಉಪಾಧ್ಯಾಯರವರಿಂದ ವೇದ ಮಂತ್ರ ಘೋಷ ನೆರವೇರಿತು. ಬೆಳಿಗ್ಗೆ 7ಗಂಟೆಯಿಂದ 7.30ರ ಸಮಯದಲ್ಲಿ ಕ್ಷೇತ್ರದ ಮೂರು ಬಾಗಿಲುಗಳನ್ನು ದಾಟಿ ಸೂರ್ಯನ ಕಿರಣಗಳು ಗರ್ಭಗುಡಿಯಲ್ಲಿ ನೆಲೆಯಾಗಿರುವ ಮಹಾಲಕ್ಷ್ಮೀಯ ಬಿಂಬದ ಮೇಲೆ ಸ್ಪರ್ಶಿಸಿದೆ. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಎನ್.ಐತ್ತಪ್ಪ ಸಪಲ್ಯರು ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ವೈದಿಕರಿಂದ ವೇದ, ಘೋಷ ಮಂತ್ರ ಮೊಳಗಿತು. ನೂರಾರು ಮಂದಿ ಭಕ್ತಾದಿಗಳು ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಂಡು ಪುನೀತರಾದರು.






ವರ್ಷದ ಕೊನೆಯ ಮಾಸವಾಗಿರುವ ಮೀನ ಸಂಕ್ರಮಣದಂದು ಸೂರ್ಯ ತನ್ನ ಪಥ ಬದಲಿಸುವ ಮಹತ್ವದ ಘಟ್ಟ. ಮೀನ ಸಂಕ್ರಮಣದಂದು ಸೂರ್ಯನ ರಶ್ಮಿ ದೇವಳದ ಗರ್ಭಗುಡಿಗೆ ಸ್ಪರ್ಶಿಸುವ ಪುಣ್ಯದಿನವಾಗಿದೆ. ಮೀನ ಸಂಕ್ರಮಣ ದಿನ ಗರ್ಭಗುಡಿಯಲ್ಲಿ ನೆಲೆಸಿರುವ ದೇವಿಯ ಬಿಂಬಕ್ಕೆ ಸೂರ್ಯನಕಿರಣಗಳು ಮುಂಜಾನೆಯಲ್ಲಿ ಸ್ಪರ್ಶಿಸುವ ರಾಜ್ಯದ ಎಕೈಕ ದೇವಸ್ಥಾನ ಇದಾಗಿದೆ ಎನ್ನಲಾಗುತ್ತಿದೆ. ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ದಿನ ಸಂಜೆಯ ವೇಳೆಗೆ ಸೂರ್ಯನ ರಶ್ಮಿಯು ಬಿಂಬವನ್ನು ಸ್ಪರ್ಶಿಸುತ್ತಿದೆ.







