ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೊಸತು ಹೊಸತು..

0

ಡಿಜಿಟಲ್‌ ಕ್ಯಾಂಪಸ್‌ – ʻನೆಕ್ಸ್ಟ್‌ 360 ಡಿಗ್ರಿʼ ತರಗತಿಗಳು

ಪುತ್ತೂರು : ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಟ್ವಾಳ-ಪುತ್ತೂರು-ಉಪ್ಪಿನಂಗಡಿಯ ಸಂಗಮ ಸ್ಥಳ ಎಂದು ಗುರುತಿಸಲ್ಪಟ್ಟ ಬಂಟ್ವಾಳ ತಾಲೂಕಿನ ಮಾಣಿ, ಸರ್ವತೋಮುಖ ಬೆಳವಣಿಗೆಯಲ್ಲಿ ವೇಗೋತ್ಕರ್ಷ ಸಾಧಿಸಿದ ಪ್ರದೇಶವಾಗಿದೆ. ಪರಮ ಪಾವನ ಪುಣ್ಯ ಕ್ಷೇತ್ರಗಳ ನೆಲೆವೀಡಲ್ಲಿ ವಿದ್ಯಾದೇವತೆಯೂ ಆವಾಸ ಹೊಂದಿದ್ದಾಳೆ. ಜೂನ್ 01, 1989 ರಲ್ಲಿ ಮಾಣಿಯ ಹೃದಯ ಭಾಗದಲ್ಲಿ, ರಾಷ್ಟ್ರೀಯ ಹೆದ್ದಾರಿ 75 ರ ಮಗ್ಗುಲಲ್ಲಿ ಶ್ರೀವಿದ್ಯಾ ಎಂಬ ನಾಮಧೇಯದೊಂದಿಗೆ ಬಾಲವಿಕಾಸ ವಿದ್ಯಾಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭಗೊಂಡವು. ಗುಣಮಟ್ಟದ ಶಿಕ್ಷಣವನ್ನು ಮೂಲಮಂತ್ರವಾಗಿಸಿಕೊಂಡು ದಾಪುಗಾಲು ಇಡುತ್ತಿದ್ದ ಈ ಸಂಸ್ಥೆ ಬಾಲವಿಕಾಸ ಎಂಬ ಅನ್ವರ್ಥ ನಾಮದೊಂದಿಗೆ ನಿಜಾರ್ಥದಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ವಿಕಸನಕ್ಕೆ ಕಂಕಣ ಬದ್ಧವಾಗಿದೆ. ಕನಿಷ್ಠ ಬಂಡವಾಳದೊಂದಿಗೆ ಕೇವಲ 13 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಈ ಸಂಸ್ಥೆ ಮೂಲ ಸೌಕರ್ಯವನ್ನು ಹೆಚ್ಚಿಸುತ್ತಾ ಗುಣಾತ್ಮಕವಾಗಿ ಹಾಗೂ ಸಂಖ್ಯಾತ್ಮಕವಾಗಿ ಬೆಳೆಯುತ್ತಾ ಇಂದು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿ ಸಮುದಾಯದೊಂದಿಗೆ ತಾಲೂಕು, ಜಿಲ್ಲೆ ಹಾಗೂ ರಾಜ್ಯದ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ. ಡಿಜಿಟಲ್‌ ಕ್ಯಾಂಪಸ್‌ ಪರಿಚಯದೊಂದಿಗೆ, ಅತ್ಯಾಧುನಿಕ ಸೌಲಭ್ಯಗಳ ಅಳವಡಿಕೆಯೊಂದಿಗೆ,ನೂತನ ಸಿಬಿಎಸ್‌ಇ ವಿದ್ಯಾಸಂಸ್ಥೆ ಏಪ್ರಿಲ್‌ ತಿಂಗಳಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ.

ಶೈಕ್ಷಣಿಕ ಚಟುವಟಿಕೆಗಳು ಪರಿಪೂರ್ಣ ಸಂಪನ್ನ:
ಹತ್ತನೇ ತರಗತಿಯಲ್ಲಿ ನೂರು ಶೇಕಡಾ ಫಲಿತಾಂಶ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಸ್ಪರ್ಧಿಸಿದ ಅನುಭವ,  ವಿಜ್ಞಾನ ನಾಟಕ ಸ್ಪರ್ಧೆಗಳಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆ, ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಸ್ಥಾನ ಹಾಗೂ ಇನ್ನಿತರ ಸಾಧನೆಗಳು ಒಂದೆಡೆಯಾದರೆ ಈ ಸಾಧನೆಗಳಿಗೆ ಪೂರಕವಾಗಿ ಜಿಮ್ ಕೊಠಡಿ ನಿರ್ಮಾಣ, ನಿರಂತರ ಚಟುವಟಿಕೆಗಳಿಂದ ಕೂಡಿದ ಸ್ಕೌಟ್-ಗೈಡ್& ಕಬ್ -ಬುಲ್ ಬುಲ್ ವಿಭಾಗಗಳು, ಕಂಪ್ಯೂಟರ್ ಶಿಕ್ಷಣ , ಸುಸಜ್ಜಿತ ಒಳಾಂಗಣ ಹಾಗೂ ಹೊರಾಂಗಣ ಸಭಾಭವನ, ಪ್ರಯೋಗಾಲಯ, ವಾಚನಾಲಯ, ಸ್ವಾದಿಷ್ಟ ಹಾಗೂ  ಪೌಷ್ಠಿಕ ಬಿಸಿಯೂಟದ ವ್ಯವಸ್ಥೆಯಂತಹ  ಮೂಲ ಸೌಕರ್ಯಗಳೊಂದಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಸಂಪನ್ನಗೊಳಿಸುತ್ತಿರುವ ಕೀರ್ತಿ ಸಂಸ್ಥೆಗಿದೆ. ಸೀಮಿತವಾದ ಸ್ಥಳಾವಕಾಶವಿದ್ದರೂ ಶಾಲೆಗೆ ದಾಖಲಾತಿ ಬಯಸಿದ ಬಾಲಕ- ಬಾಲಕಿಯರ ಶೈಕ್ಷಣಿಕ ವಿಕಾಸವನ್ನೇ ಪ್ರಮುಖ ಲಕ್ಷ್ಯವಾಗಿಸಿ, ಯಾವುದೇ ಫಲಾಪೇಕ್ಷೆಗಳನ್ನು ಬಯಸದೇ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಪ್ರಾಜ್ಞರ ನುಡಿಯಂತೆ ಸಾಗಿದುದರ ಫಲವಾಗಿ ಸಂಸ್ಥೆ ಏರುಗತಿಯಲ್ಲಿ ಸಾಗುತ್ತಾ ಸುತ್ತಮುತ್ತಲ ಜನವಸತಿ ಪ್ರದೇಶದಲ್ಲಿ ಗುರುತಿಸಲ್ಪಟ್ಟಿದೆ. ಅನುಭವಿ ಬೋಧಕ-ಬೋಧಕೇತರ ಸಿಬ್ಬಂದಿಗಳ ತಂಡದೊಂದಿಗೆ ಸಂಸ್ಥೆ ಶೈಕ್ಷಣಿಕವಾಗಿ ಪರಿಪೂರ್ಣತೆಯೊಂದಿಗೆ ದಾಪುಗಾಲು ಇಡುತ್ತಿದೆ.
ಸಂಸ್ಥೆಯು ತನ್ನ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಭೌತಿಕ ಸೌಲಭ್ಯಗಳನ್ನು ಒದಗಿಸಿಕೊಂಡು. ‘ಶಿಕ್ಷಣವೇ ಶಕ್ತಿ’ ಎಂಬ ಮಾತಿನಲ್ಲಿ ಅಚಲವಾದ ನಂಬಿಕೆಯನ್ನಿಟ್ಟು ಹೊಂದಾಣಿಕೆಯೊಂದಿಗೆ ಮುನ್ನಡೆಯುತ್ತಿದ್ದ ಸಂದರ್ಭದಲ್ಲಿ  ರಾಷ್ಟ್ರೀಯ ಹೆದ್ದಾರಿ ಚತುಷ್ಪಥದ ನಿರ್ಮಾಣ ಕಾಮಗಾರಿ ದೈತ್ಯಾಕಾರದ ಸಮಸ್ಯೆಯಾಗಿ ಎದುರುಗೊಂಡರೂ, ಸಂಚಾಲಕರ ಸಮಯಪ್ರಜ್ಞೆ ಜಾಗೃತಿಯಾಗಿ ವಿನೂತನ ಪರಿಕಲ್ಪನೆಯ ಶೈಕ್ಷಣಿಕ ಸಂಸ್ಥೆಯೊಂದರ ಹುಟ್ಟಿಗೆ ನಾಂದಿಯಾಯಿತು. ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಸಂಚಾಲಕರಾಗಿರುವ ಪ್ರಹ್ಲಾದ್ ಜೆ. ಶೆಟ್ಟಿ ಮತ್ತು ಕಾರ್ಯದರ್ಶಿ ಮಹೇಶ್ ಜೆ. ಶೆಟ್ಟಿ ಹಾಗೂ ಆಡಳಿತ ಮಂಡಳಿಯ ದೂರದರ್ಶಿತ್ವದ ಫಲಶ್ರುತಿಯೇ ನೂತನವಾಗಿ ಖರೀದಿಸಿದ 5 ಎಕರೆ ಜಾಗದಲ್ಲಿ ಹೆಮ್ಮೆಯಿಂದ ತಲೆ ಎತ್ತಿ ನಿಂತಿರುವ 68,000 ಚದರ ಅಡಿಯಲ್ಲಿ ನಿರ್ಮಾಣಗೊಂಡಿರುವ ಸುಯೋಜಿತ – ಸುವ್ಯವಸ್ಥಿತ –ಸುಸಜ್ಜಿತವಾದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ.’ ಚತುಷ್ಪಥ ಕಾಮಗಾರಿ ಶೈಕ್ಷಣಿಕ ಕ್ರಾಂತಿಗೆ ಸಂಕ್ರಾಂತಿಯಾಗಿ ಪರಿಣಮಿಸಿತುʼ ಎಂಬ ಧನ್ಯತಾ ಭಾವದಲ್ಲಿದೆ ಸಂಸ್ಥೆಯ ಆಡಳಿತ ಮಂಡಳಿ.

ಡಿಜಿಟಲ್‌ ಕ್ಯಾಂಪಸ್‌ ವೈಶಿಷ್ಟ್ಯತೆಗಳು:
ನೂತನ ವಿದ್ಯಾಕೇಂದ್ರದಲ್ಲಿ ಅಮೃತಶಿಲೆಯಲ್ಲಿ ರೂಪಪಡೆದ ವಿದ್ಯಾಧಿದೇವತೆ ಸರಸ್ವತಿಯ ವಿಗ್ರಹ ಭಕ್ತಿಭಾವದಲ್ಲಿ ಮಿಂದೇಳುವಂತೆ ಮಾಡುತ್ತಿದೆ. ಕಚ್ಚಾ ನೆಲದಿಂದ ಹೊಳಪಿನ ಟೈಲ್ಸ್ ನೆಲದೆಡೆಗೆ, ಕರಿಹಲಗೆಯಿಂದ ಡಿಜಿಟಲ್ ಬೋರ್ಡ್‌ನೆಡೆಗೆ ನಡೆದ ಪರಿವರ್ತನೆಯ ನಡಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಬಣ್ಣತುಂಬುವ ಕಾಮನಬಿಲ್ಲಿನಂತಿದೆ. ಹಿಂದಿನ ಗುಲಾಬಿ ಬಣ್ಣದ ಸಮವಸ್ತ್ರದ ಸ್ಥಾನವನ್ನು ಇಂದು ನವವರ್ಣದ, ನವವಿನ್ಯಾಸದ ಸಮವಸ್ತ್ರವು ಅಲಂಕರಿಸಿ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ತಂದಿದೆ.  200 ಮೀಟರ್ ಟ್ರ್ಯಾಕ್ ವಿಸ್ತಾರವಿರುವ ಸ್ವ-ಆಟದ ಮೈದಾನವು ವಿದ್ಯಾರ್ಥಿಗಳ ಕ್ರೀಡಾ ಸ್ಫೂರ್ತಿಯು ನೀತಿಯ ಹಾದಿಯಲ್ಲಿ ಸಾಗಿ ಕೀರ್ತಿಯ ಜ್ಯೋತಿಯನ್ನು ಉತ್ತುಂಗದಲ್ಲಿ ಬೆಳಗಿಸುವ ಅಭಿಲಾಷೆ ಹೊಂದಿದೆ. ಸಮರ್ಪಕ ಗಾಳಿ-ಬೆಳಕಿನ ಸಂಚಾರವಿರುವ ಅತ್ಯಾಧುನಿಕ ತಂತ್ರಜ್ಞಾನದ ಡಿಜಿಟಲ್ ತರಗತಿ ಕೊಠಡಿಗಳು, ಪ್ರತೀ ಅಂತಸ್ತಿನಲ್ಲೂ ನಿರ್ಮಿತವಾದ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಪ್ರತ್ಯೇಕ ಶೌಚಾಲಯಗಳು, ವಿಶಾಲವಾದ ಶಾಲಾ ಕಛೇರಿ, ಶಿಕ್ಷಕರ ಕೊಠಡಿ, ಗ್ರಂಥಾಲಯ-ಪ್ರಯೋಗಾಲಯ –ವಾಚನಾಲಯಗಳು, 1500 ಜನರು ಏಕಕಾಲದಲ್ಲಿ ಕುಳಿತುಕೊಳ್ಳಲು ಸಾಮರ್ಥ್ಯವಿರುವ ಸಭಾಭವನ ಮತ್ತು ವಿಶಾಲವಾದ ಸಭಾವೇದಿಕೆ, ದೃಶ್ಯ-ಶ್ರವ್ಯ ಕೊಠಡಿ, ಪುಟ್ಟ ಮಕ್ಕಳಿಗೆ ಪ್ರತ್ಯೇಕ ಆಟದ ಕೊಠಡಿ, ರಾಷ್ಟ್ರೀಯ ಶಿಕ್ಷಣ ನೀತಿಗೆ ಅನ್ವಯಿಸುವಂತೆ ಅಳವಡಿಸಿಕೊಂಡ ವಿಶೇಷ ತಂತ್ರಜ್ಞಾನದ ವ್ಯವಸ್ಥೆ, ರಾಜ್ಯಪಠ್ಯಕ್ರಮದೊಂದಿಗೆ 2023-24 ನೇ ಶೈಕ್ಷಣಿಕ ಸಾಲಿನಿಂದ ಕೇಂದ್ರೀಯ ಪಠ್ಯಕ್ರಮದ ಅಳವಡಿಕೆ – ಈ ಎಲ್ಲಾ ಅಭೂತಪೂರ್ವ ಬದಲಾವಣೆಗಳನ್ನು ಮೈದುಂಬಿಕೊಂಡು, ಈ ವಿದ್ಯಾಸಂಸ್ಥೆಯು ಪ್ರಗತಿಯ ಪಥದಲ್ಲಿ ಪರಿಣಾಮಕಾರಿಯಾಗಿ ಪಯಣಿಸಲು ಸನ್ನದ್ಧವಾಗಿದೆ.

ಶಾಲಾ ವಾಹನ ವ್ಯವಸ್ಥೆ :
ಮಾಣಿಯಿಂದ ಪ್ರಮುಖ ಸ್ಥಳಗಳಿಗೆ ಜಿಪಿಎಸ್‌ ಸೌಲಭ್ಯ ಅಳವಡಿಸಿರುವ ಶಾಲಾ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.
ಒಟ್ಟಿನಲ್ಲಿ ಆಧುನಿಕತೆಯ ಹೊಸ್ತಿಲಲ್ಲಿ ಭಾರತೀಯ ಶಿಕ್ಷಣ ಪದ್ಧತಿ – ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿನೂತನ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಬಾಲವಿಕಾಸ ವಿದ್ಯಾಸಂಸ್ಥೆ ಮುಂದಾಗಿದ್ದು, ಪೋಷಕರು ವಿದ್ಯಾಭಿಮಾನಿಗಳಿಂದ ಉತ್ತಮ ಸ್ಪಂದನೆ ದೊರಕುತ್ತಿದೆ.

ಶುಭಾರಂಭದ ವಿಶೇಷ ಆಫರ್‌ಗಳು
ನರ್ಸರಿಯಿಂದ ಹತ್ತನೇ ತರಗತಿಯವರೆಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ಶಾಲಾ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಹೊಸ ಕ್ಯಾಂಪಸ್‌ ಶುಭಾರಂಭದ ಪ್ರಯುಕ್ತ ವಿಶೇಷ ಆಫರ್‌ ಕಲ್ಪಿಸಲಾಗಿದೆ. ಹೊಸ ಪ್ರವೇಶಾತಿಗೆ ಡೊನೇಷನ್‌ ಇರುವುದಿಲ್ಲ. ನರ್ಸರಿ ತರಗತಿಗೆ ಪ್ರತೀ ತಿಂಗಳಿಗೆ ರೂ. 1000 ದಂತೆ ಹಾಗೂ ಎಲ್‌ಕೆಜಿ ಮತ್ತು ಯುಕೆಜಿಗೆ ಪ್ರತೀ ತಿಂಗಳಿಗೆ ರೂ. 1600 ರಂತೆ ಶಾಲಾ ಶುಲ್ಕ ನಿಗದಿ ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 0824- 6666687, ಮೊ:9902226466 ನ್ನು ಸಂಪರ್ಕಿಸಬಹುದಾಗಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ʻನೆಕ್ಸ್ಟ್‌ 360 ಡಿಗ್ರಿ‌ʼ ತರಗತಿ ಕೋಣೆಗಳು
ವಿದ್ಯಾರ್ಥಿಗಳಲ್ಲಿ 21ನೇ ಶತಮಾನದ ಹೊಸ ಕೌಶಲ್ಯಗಳನ್ನು ಅಳವಡಿಸಿ ಅಭಿವೃದ್ಧಿಪಡಿಸಲು ಸಿಬಿಎಸ್‌ಇ ತರಗತಿಗಳಲ್ಲಿ ʻನೆಕ್ಸ್ಟ್‌360 ಡಿಗ್ರಿʼಎಂಬ ಹೊಸ ಪರಿಕಲ್ಪನೆ ತರಲಾಗಿದೆ. ಇದರ ಮೂಲಕ ಚಾಕ್‌ ಮತ್ತು ಟಾಕ್‌ ಪದ್ಧತಿಯ ಬದಲಾಗಿ, ಎಲ್ಲಾ ತರಗತಿಗಳಲ್ಲಿ ವಿಶೇಷ ಡಿಜಿಟಲ್‌ ಸಂವಹನ ಪರದೆಗಳನ್ನು ಅಳವಡಿಸಲಾಗಿದೆ.

ಪೇಟೆಪಟ್ಟಣಗಳಲ್ಲಿ ಸಿಗುವ ಶಿಕ್ಷಣ – ತರಗತಿಗಳಿಗೆ ಸಂಪೂರ್ಣ ಡಿಜಿಟಲ್ ಟಚ್
 ದೊಡ್ಡದೊಡ್ಡ ಪೇಟೆ- ಪಟ್ಟಣಗಳಲ್ಲಿ ಸಿಗುವ ಸವಲತ್ತುಗಳು ಗ್ರಾಮೀಣ ಭಾಗದಲ್ಲಿರುವ ನಮ್ಮ ಮಕ್ಕಳಿಗೂ ಸಿಗಬೇಕೆನ್ನುವ ನಿಟ್ಟಿನಲ್ಲಿ ನೂತನ ಕಟ್ಟಡದಲ್ಲಿ ಹೊಸಹೊಸ ಯೋಜನೆಗಳನ್ನು ಅಳವಡಿಸಿಕೊಂಡು ಮಿತದರದಲ್ಲಿ ಶಿಕ್ಷಣ ನೀಡಲು ಮುಂದಾಗಿದ್ದೇವೆ. ನೂತನ ಕಟ್ಟಡದಲ್ಲಿ ಆರಂಭವಾಗಲಿರುವ ನಮ್ಮ ಶಾಲೆಯ ಪ್ರತಿಯೊಂದು ತರಗತಿಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲಾಗಿದೆ. ಇದರ ಬಗ್ಗೆ ಈ ಭಾಗದ ವಿದ್ಯಾರ್ಥಿಗಳ ಪೋಷಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
—ಪ್ರಹ್ಲಾದ ಶೆಟ್ಟಿ ಜೆ. ಸಂಚಾಲಕರು,
ಬಾಲವಿಕಾಸ ಟ್ರಸ್ಟ್ ಮಾಣಿ

LEAVE A REPLY

Please enter your comment!
Please enter your name here