ಪತ್ತೆಯಾಗದ ಮಕ್ಕಳನ್ನು ನಿರ್ಲಕ್ಷಿಸಿ ಹೋದ ಹೆತ್ತವರು

0

ಉಪ್ಪಿನಂಗಡಿ: ಕಳೆದ ಜೂ.2 ರಂದು ಕರಾಯ ಗ್ರಾಮದ ಮನೆಯೊಂದರಲ್ಲಿ 1 ತಿಂಗಳ ಹಸುಕೂಸು ಸಹಿತ ಇಬ್ಬರು ಮಕ್ಕಳನ್ನು ನಿರ್ಲಕ್ಷಿಸಿ ಬಿಟ್ಟುಹೋಗಿರುವ ಹೆತ್ತವರು ಎರಡು ವಾರ ಕಳೆದರೂ ಪತ್ತೆಯಾಗದಿರುವುದು ಕಳವಳಕಾರಿ ಎನಿಸಿದ್ದು, ಹೆತ್ತವರ ಸಾಮೀಪ್ಯ ಕಳೆದುಕೊಂಡ ಎಳೆ ಮಕ್ಕಳಿಬ್ಬರು ಆಶ್ರಮದಲ್ಲಿದ್ದು ಹೆತ್ತವರ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಬೆಳ್ತಂಗಡಿ ತಾಲೂಕು ಕರಾಯ ಪರಿಸರದಲ್ಲಿ ಬುಟ್ಟಿ ಹೆಣಿಯುವ ಕಾಯಕದ ದಂಪತಿಯು ಮದ್ಯ ವ್ಯಸನಿಗಳಾಗಿ, ಅಲ್ಲಲ್ಲಿ ಮಲಗಿಕೊಂಡು ಅವ್ಯವಸ್ಥಿತ ಜೀವನ ನಡೆಸುತ್ತಿದ್ದರು. ಈ ದಂಪತಿಗೆ ದಿನೇಶ ಎಂಬ ನಾಲ್ಕು ವರ್ಷದ ಮಗನಿದ್ದು, ಒಂದು ತಿಂಗಳ ಹಿಂದೆಯಷ್ಟೇ ಮತ್ತೊಂದು ಹೆಣ್ಣು ಮಗು ಜನಿಸಿತ್ತು. ಈ ಎರಡು ಮಕ್ಕಳನ್ನು ಜೂ.2 ರಂದು ಕರಾಯ ಗ್ರಾಮದ ಫಾತಿಮಾ ಎಂಬಾಕೆಯ ಮನೆಯಲ್ಲಿ ಬಿಟ್ಟು, ನಾವು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಹೋಗಿ ಬರುತ್ತೇವೆ ಎಂದು ತಿಳಿಸಿ ಹೋದವರು ಬಳಿಕ ಹಿಂದಿರುಗದೆ ನಾಪತ್ತೆಯಾಗಿದ್ದಾರೆ.
ಒಂದು ತಿಂಗಳ ಹಸುಕೂಸು ಸಹಿತ ಇಬ್ಬರು ಮಕ್ಕಳ ಲಾಲನೆ ಪಾಲನೆ ಮಾಡಿದ ಫಾತಿಮ ರವರು 2 ದಿನ ಕಳೆದರೂ ಹೆತ್ತವರು ಕಾಣಿಸಿಕೊಳ್ಳದೇ ಹೋದಾಗ ಕಳವಳಗೊಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಮಕ್ಕಳನ್ನು ಜೂ.4ರಂದು ಪುತ್ತೂರಿನ ರಾಮಕೃಷ್ಣಾಶ್ರಮಕ್ಕೆ ಒಪ್ಪಿಸಿ ಪೊಲೀಸರಿಗೆ ದೂರು ನೀಡಿದ್ದರು.
ದೂರಿನಾಧಾರದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ನಾಪತ್ತೆಯಾದ ದಂಪತಿಯು ಪತ್ತೆಯಾಗದಿದ್ದರೂ ಈ ದಂಪತಿಯು ಆಲಂಗಾರು – ಕಡಬ ಪರಿಸರದ ನಿವಾಸಿಗರೆನ್ನುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಎಂತೆಂಥಾ ಪ್ರಕರಣಗಳನ್ನು ಭೇಧಿಸುವ ವ್ಯವಸ್ಥೆಯೊಳಗೆ ಎಳೆಯ ಮಕ್ಕಳಿಬ್ಬರ ಪೋಷಕರನ್ನು ಪತ್ತೆ ಹಚ್ಚಲಾಗದ ದುಃಸ್ಥಿತಿ ನಿರ್ಮಾಣವಾಗಿರುವುದು ಮಾತ್ರ ಇಲ್ಲಿ ವಿಪರ್ಯಾಸವೆನಿಸಿದೆ.

LEAVE A REPLY

Please enter your comment!
Please enter your name here