ಬಜತ್ತೂರು: ಸಾಲ ಮರುಪಾವತಿಸಲಾಗದ ಚಿಂತೆ -ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಬಾಲಕೃಷ್ಣ ಗೌಡ ಮೃತ್ಯು

0

ನೆಲ್ಯಾಡಿ: ಹೊಸ ಮನೆ ನಿರ್ಮಾಣಕ್ಕೆ ಸಂಘ ಸಂಸ್ಥೆ ಹಾಗೂ ಕೈ ಸಾಲವಾಗಿ ಪಡೆದುಕೊಂಡಿದ್ದ ಸಾಲವನ್ನು ಹಿಂತಿರುಗಿಸಲು ಆಗದೇ ಇರುವ ಬೇಸರದಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆಯಲ್ಲಿದ್ದ ಬಜತ್ತೂರಿನ ಆರಕರೆ ಮನಿಕ್ಕಳ ನಿವಾಸಿ, ಕೂಲಿಕಾರ್ಮಿಕ ಬಾಲಕೃಷ್ಣ ಗೌಡ(39ವ.)ಎಂಬವರು ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆ.13ರಂದು ಮೃತಪಟ್ಟಿದ್ದಾರೆ.


ಬಾಲಕೃಷ್ಣ ಗೌಡ ಅವರು ಹೊಸ ಮನೆ ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಹಲವರಿಂದ ಕೈಸಾಲ ಹಾಗೂ ಸಂಘ ಸಂಸ್ಥೆಯಿಂದ ಸುಮಾರು 6.50 ಲಕ್ಷ ರೂ.ಸಾಲವಾಗಿ ಪಡೆದುಕೊಂಡಿದ್ದರು. ಈ ಸಾಲ ಮರುಪಾವತಿಸಲು ಆಗದೇ ಬೇಸರದಿಂದ ಇದ್ದವರು ಆ.7ರಂದು ಬೆಳಿಗ್ಗೆ ಹೊಸ ಮನೆಗೆ ಹೋಗಿ ತಂದೆಗೆ ಫೋನ್ ಕರೆಮಾಡಿ ನಾನು ವಿಷ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದರು. ಈ ವಿಷಯ ತಿಳಿದ ಬಾಲಕೃಷ್ಣರವರ ಸಹೋದರ ಶ್ರೀಧರ ಅವರು ಬಾಲಕೃಷ್ಣರನ್ನು ಚಿಕಿತ್ಸೆಯ ಬಗ್ಗೆ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಪ್ರಥಮ ಚಿಕಿತ್ಸೆ ನೀಡಿ ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿದ್ದರು. ಆ.13ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಬರುವಾಗ ದಾರಿ ಮಧ್ಯೆ ಬಾಲಕೃಷ್ಣರವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಚಿಕಿತ್ಸೆಗೆ ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ಕರೆತಂದ ವೇಳೆ ಅವರು ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ದೃಢಪಡಿಸಿದ್ದರು. ಈ ಬಗ್ಗೆ ಬಾಲಕೃಷ್ಣ ಅವರ ಸಹೋದರ ಶ್ರೀಧರ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ:174 CRPC ಯಂತೆ ಪ್ರಕರಣ ದಾಖಲಾಗಿದೆ. ಮೃತ ಬಾಲಕೃಷ್ಣ ಅವರು ತಂದೆ ಲಿಂಗಪ್ಪ ಗೌಡ, ತಾಯಿ ಕುಸುಮಾವತಿ, ಗರ್ಭಿಣಿ ಪತ್ನಿ ಹಾಗೂ ಮೂರುವರೇ ವರ್ಷದ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here