ಮುಂಡೋಳೆ: ಮಜ್ಲಿಸುನ್ನೂರು 4ನೇ ವಾರ್ಷಿಕೋತ್ಸವ

0

ಧರ್ಮ ಸಹಿಷ್ಣುತೆಯಿಂದಲೇ ಸೌಹಾರ್ದ ಸಮಾಜ ನಿರ್ಮಾಣ: ಅಶೋಕ್ ಕುಮಾರ್ ರೈ

ಪುತ್ತೂರು: ಎಸ್‌ವೈಎಸ್ ಹಾಗೂ ಎಸ್‌ಕೆಎಸ್‌ಎಸ್‌ಎಫ್ ಬಡಗನ್ನೂರು ಮುಂಡೋಳೆ ಶಾಖೆ ಇದರ ಆಶ್ರಯದಲ್ಲಿ ಮಜ್ಲಿಸುನ್ನೂರು 4ನೇ ವಾರ್ಷಿಕೋತ್ಸವ ಮಾ.8ರಂದು ರಾತ್ರಿ ಮುಂಡೋಳೆ ಬದ್ರಿಯಾ ಜುಮಾ ಮಸೀದಿ ಬಳಿ ನಡೆಯಿತು.

ಸಮಾರಂಭದ ಮುಖ್ಯ ಅತಿಥಿ ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈಯವರು ಮಾತನಾಡಿ, ಭಾರತ ವಿಶ್ವಗುರುವಾಗಬೇಕಾದರೆ ದೇಶದ ಪ್ರಜೆಗಳು ಜಾತಿ, ಧರ್ಮದ ಭಿನ್ನತೆ ಮರೆತು ಪರಸ್ಪರ ಕೈ ಜೋಡಿಸಿ ರಾಷ್ಟ್ರಕಟ್ಟುವ ಕೆಲಸ ಮಾಡಬೇಕಿದೆ. ಪ್ರತಿಯೊಂದು ಧರ್ಮದ ಧರ್ಮಗುರುಗಳು ಧರ್ಮ ಸಹಿಷ್ಣುತೆಯನ್ನು ಬೋಧಿಸುವ ಮೂಲಕ ಸುಂದರ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದು ಹೇಳಿದರು. ರಾಜಕೀಯ ಲಾಭಕ್ಕೋಸ್ಕರ ಜಾತಿ, ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಇದರಿಂದ ಕೆಲವರಿಗೆ ತಾತ್ಕಾಲಿಕ ಲಾಭ ಸಿಗಬಹುದೇ ಹೊರತು ಇದು ದೇಶದ ಭವಿಷ್ಯಕ್ಕೆ ಮಾರಕವಾಗಲಿದೆ. ಎಲ್ಲರೂ ಸೌಹಾರ್ದತೆಯಿಂದ ಬದುಕಬೇಕೆಂದು ಅಶೋಕ್ ಕುಮಾರ್ ರೈ ಹೇಳಿದರು.

ಮಜ್ಲಿಸುನ್ನೂರು ನೇತೃತ್ವ ವಹಿಸಿದ್ದ ಆತೂರು ಬದ್ರಿಯಾ ಶರೀಅತ್ ಕಾಲೇಜಿನ ಪ್ರಾಂಶುಪಾಲ ಸೈಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್‌ರವರು ಮಾತನಾಡಿ, ಮನಸ್ಸನ್ನು ಸಂಸ್ಕರಿಸಲು ಆಧ್ಯಾತ್ಮಿಕ ಸಂಗಮಗಳು ನಡೆಯುತ್ತಿರಬೇಕು. ಪೂರ್ವಿಕರ ತ್ಯಾಗ, ಭಕ್ತಿಯನ್ನು ಸ್ಮರಿಸುವ ಮೂಲಕ ಅವರ ಗುಣಗಳನ್ನು ತಮ್ಮ ಬದುಕಿನಲ್ಲೂ ಅಳವಡಿಸಿಕೊಂಡಾಗ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.



ಕಾರ್ಯಕ್ರಮ ಉದ್ಘಾಟಿಸಿದ ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಮುಫ್ತಿ ರಫೀಕ್ ಅಹ್ಮದ್ ಹುದವಿ ಕೋಲಾರಿಯವರು ಮಾತನಾಡಿ, ಕಳೆದ ಒಂದು ಶತಮಾನಗಳಿಂದ ಅಹ್ಲುಸುನ್ನತ್ ಜಮಾಅತ್‌ನ ಪರಂಪರೆಯನ್ನು ಮುಸ್ಲಿಂ ಸಮುದಾಯದಲ್ಲಿ ಕಾಪಾಡಿಕೊಂಡು ಬರುವಲ್ಲಿ ಸಮಸ್ತವು ಯಶಸ್ವಿಯಾಗಿದೆ. ಸಮುದಾಯದೊಳಗೆ ಭಿನ್ನತೆಯನ್ನು ಸೃಷ್ಟಿಸುವವರನ್ನು ಕಟ್ಟಿ ಹಾಕಿ, ಶೈಕ್ಷಣಿಕವಾಗಿಯೂ, ಸಮಾಜಿಕವಾಗಿಯೂ ಮುಸ್ಲಿಮರನ್ನು ಜಾಗೃತಗೊಳಿಸುತ್ತಾ ಬಂದಿದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಮುಹಮ್ಮದ್ ಹಾಜಿ ಬಡಗನ್ನೂರು, ನೂರುಲ್ ಹುದಾ ಮಾಡನ್ನೂರು ಪ್ರಾಂಶುಪಾಲ ಹನೀಫ್ ಹುದವಿ ದೇಲಂಪಾಡಿ ಶುಭಹಾರೈಸಿದರು. ಮುಹಮ್ಮದ್ ಮುಸ್ಲಿಯಾರ್ ನವವಿ ಮುಂಡೋಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ವೈಎಸ್ ಮುಂಡೋಳೆ ಶಾಖೆಯ ಅಧ್ಯಕ್ಷ ಅಬ್ದುಲ್ ರಹ್ಮಾನ್ ಹಾಜಿ ಅಧ್ಯಕ್ಷತೆ ವಹಿಸಿದರು. ಬದ್ರಿಯಾ ಜುಮಾ ಮಸೀದಿ ಮುಂಡೋಳೆ ಅಧ್ಯಕ್ಷ ಅಶ್ರಫ್ ಪಟ್ಟೆ ಧ್ವಜಾರೋಹಣಗೈದರು. ಮಸೀದಿ ಖತೀಬ ಅಶ್ರಫ್ ರಹ್ಮಾನಿ ವೀರಮಂಗಿಲ ಪ್ರಾರ್ಥನೆಗೈದರು. ಖ್ಯಾತ ವಾಗ್ಮಿ ಅಬೂಬಕ್ಕರ್ ಸಿದ್ದೀಕ್ ಅಝ್ಹರಿ ಪಯ್ಯನ್ನೂರು ಮುಖ್ಯಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಖಲೀಲುರಹ್ಮಾನ್ ಅರ್ಷದಿ, ಶಂಸುದ್ದೀನ್ ದಾರಿಮಿ ಪಮ್ಮಲೆ, ಹಿರಾ ಅಬ್ದುಲ್ ಖಾದರ್ ಹಾಜಿ, ಎನ್.ಎಸ್. ಅಬ್ದುಲ್ಲಾ ಹಾಜಿ, ಅಬೂಬಕ್ಕರ್ ಹಾಜಿ ಮಂಗಳ, ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಖತ್ತರ್ ಇಬ್ರಾಹಿಂ ಹಾಜಿ ಮಂಡೆಕೋಲು, ಕೆ.ಬಿ ಸಲೀಂ ಮಿತ್ತೂರು, ಕೆ.ಬಿ. ಸಿರಾಜ್ ಮಿತ್ತೂರು, ಅಹ್ಮದ್ ಹಾಜಿ ಮಿತ್ತೂರು, ಇಬ್ರಾಹಿಂ (ಉಂಬಿ) ಪಲ್ಲತ್ತೂರು, ಮುಹಮ್ಮದ್ ಪಟ್ಟೆ, ಸಿ.ಎಂ.ಮುಹಮ್ಮದ್ ಹಾಜಿ, ಸಿ.ಎಚ್. ಅಝೀಝ್, ಇಸ್ಮಾಯಿಲ್ ಹಾಜಿ ಕೌಡಿಚ್ಚಾರ್, ಸಲಾಂ ಪದಡ್ಕ, ರಫೀಕ್ ಫೈಝಿ ಇರ್ಫಾನಿ, ಮುಹಮ್ಮದ್ ಮುಸ್ಲಿಯಾರ್ ಕೊಲ್ಪೆ, ಸಾದಿಕ್ ಮುಸ್ಲಿಯಾರ್ ಕಟ್ಟತ್ತಾರ್, ಇಬ್ರಾಹಿಂ ಹಾಜಿ ಮುಂಡೋಳೆ, ಇಬ್ರಾಹಿಂ ಕೆಮನಡ್ಕ, ಅಬ್ಬಾಸ್ ಪೆರಿಗೇರಿ, ಮುಹಮ್ಮದ್ ಹಾಜಿ ಈಂದುಮೂಲೆ, ಅಬೂಬಕ್ಕರ್ ಕೆಮನಡ್ಕ ಮುಂತಾದವರು ಪಾಲ್ಗೊಂಡಿದ್ದರು.
ಸಿದ್ದೀಕ್ ಅಝ್ಹರಿ ಸ್ವಾಗತಿಸಿ, ಇಬ್ರಾಹಿಂ ಕೌಸರಿ ವಂದಿಸಿದರು. ಯೂಸುಫ್ ಮುಂಡೋಳೆ ನಿರೂಪಿಸಿದರು.

ಸನ್ಮಾನ :
ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಮುಫ್ತಿ ರಫೀಕ್ ಅಹ್ಮದ್ ಹುದವಿ , ಎಸ್‌ಕೆಎಸ್‌ಎಸ್‌ಎಫ್ ದ.ಕ. ಈಸ್ಟ್ ಜಿಲ್ಲಾಧ್ಯಕ್ಷ ಮುಹಮ್ಮದ್ ನವವಿ ಮುಂಡೋಳೆ ಅವರನ್ನು ಎಸ್ಕೆಎಸ್ಸೆಸ್ಸೆಫ್ ಶಾಖಾ ಮುಖಂಡ ಮುಹಮ್ಮದ್ ಹಾಜಿ ಗೋಳಿತ್ತಡಿ, ಜುನೈದ್ ಮುಂಡೋಳೆ, ಹಂಝ ಹಾಜಿ ಅವರು ಸನ್ಮಾನಿಸಿದರು. ಕಳೆದ ಬಾರಿ ನಡೆದ ಮುಸಾಬಕ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಮುಂಡೋಳೆ ಮದ್ರಸ ವಿದ್ಯಾರ್ಥಿಗಳಾದ ಫಾತಿಮತ್ ಸಹ್ಲಾ, ಮುಹಮ್ಮದ್ ಸಫಾಫ್ ಮುಂಡೋಳೆ, ಮುಹಮ್ಮದ್ ಅಬೂಬಕ್ಕರ್, ಮುಹಮ್ಮದ್ ಖಾಸಿಂ ಅವರನ್ನು ಗೌರವಿಸಲಾಯಿತು.

ಮನವಿ ಸಲ್ಲಿಕೆ:ಮುಂಡೋಳೆ ವ್ಯಾಪ್ತಿಯಲ್ಲಿ ಹೈಮಾಸ್ಟ್ ಸೋಲಾರ್ ದೀಪ ಅಳವಡಿಕೆ, ರಸ್ತೆ ಕಾಂಕ್ರಿಟೀಕರಣ, ಸೇತುವೆ ನಿರ್ಮಾಣ, ಬಸ್ ಸಂಚಾರ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮುಂಡೋಳೆ ನಾಗರಿಕರ ವತಿಯಿಂದ ಮನವಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here