ಪುತ್ತೂರು ಜಾತ್ರೆ:ಇಂದು,ನಾಳೆ ವಾಹನ ಸಂಚಾರದಲ್ಲಿ ಬದಲಾವಣೆ

0

ಹಲವೆಡೆ ಪಾರ್ಕಿಂಗ್‌ಗೆ ವ್ಯವಸ್ಥೆ-ಸಾರ್ವಜನಿಕರ ಸಹಕಾರಕ್ಕೆ ಪೊಲೀಸ್ ಮನವಿ

ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಏ.16.17ರಂದು ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.


ಏ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಕಿರುವಾಳು ಬರುವ ಸಂದರ್ಭ ಮತ್ತು ಏ.17ರಂದು ಮಹಾಲಿಂಗೇಶ್ವರ ದೇವರ ದರ್ಶನ ಬಲಿ ಮತ್ತು ರಾತ್ರಿ ನಡೆಯುವ ಬ್ರಹ್ಮರಥೋತ್ಸವದ ಅಂಗವಾಗಿ ಪುತ್ತೂರು ಪೇಟೆಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗುವುದು ಮತ್ತು ವಾಹನ ಪಾರ್ಕಿಂಗ್‌ಗೂ ಸೂಕ್ತ ಸ್ಥಳ ಗುರುತಿಸುವ ಕುರಿತು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಿಗೆ ಪೊಲೀಸ್ ಇಲಾಖೆ ವರದಿ ನೀಡಿದೆ.ಸಹಾಯಕ ಆಯುಕ್ತರ ಪ್ರಸ್ತಾವನೆಗೆ ಜಿಲ್ಲಾಧಿಕಾರಿಯವರು ಈ ಕುರಿತು ಅಧಿಕೃತ ಆದೇಶ ಹೊರಡಿಸಲಿದ್ದಾರೆ.


ಬದಲಾದ ವಾಹನ ಸಂಚಾರ:
ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊರಡುವ ಬಸ್‌ಗಳು ಎಂ.ಟಿ.ರಸ್ತೆಯ ಮೂಲಕ ತೆರಳಿ, ಮುಂದೆ ಎಡಕ್ಕೆ ತಿರುಗಿ ಪರ್ಲಡ್ಕ ಬೈಪಾಸ್ ಮೂಲಕ ತೆರಳುವುದು.
ಕಬಕ-ಮಂಗಳೂರು ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್‌ಗಳು ಲಿನೆಟ್(ಉದಯಗಿರಿ)ಬೊಳುವಾರು ಪಡೀಲ್-ಕೊಟೇಚಾ ಹಾಲ್ ಕ್ರಾಸ್ ಸಾಲ್ಮರ ಎಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಬರುವುದು. ಉಪ್ಪಿನಂಗಡಿ ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್‌ಗಳು ಪಡೀಲ್ ಕೊಟೇಚಾ ಹಾಲ್ ಕ್ರಾಸ್ ಸಾಲ್ಮರ ಎಪಿಎಂಸಿಯಾಗಿ ಬಸ್‌ನಿಲ್ದಾಣಕ್ಕೆ ಬರುವುದು.
ಮಡಿಕೇರಿ,ಸುಳ್ಯ,ಸಂಪ್ಯ ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್‌ಗಳು ಅಶ್ವಿನಿ ಜಂಕ್ಷನ್ ದರ್ಬೆ-ಅರುಣಾ ಕಲಾ ಮಂದಿರದ ಎದುರು ರಸ್ತೆ ಮೂಲಕ ಬಸ್ ನಿಲ್ದಾಣಕ್ಕೆ ಬರುವುದು.


ಆಟೋ ರಿಕ್ಷಾಗಳು ಸಂಚರಿಸುವ ಮಾರ್ಗ:
ನೆಹರುನಗರ ಬೊಳುವಾರು ಕಡೆಯಿಂದ ಬರುವ ಅಟೋ ರಿಕ್ಷಾಗಳು ಮಯೂರ ಇನ್‌ಲ್ಯಾಂಡ್ ಬಳಿ ಪ್ರಯಾಣಿಕರನ್ನು ಇಳಿಸಿ ಉರ್ಲಾಂಡಿ ಕ್ರಾಸ್ ಮೂಲಕ ಹಿಂದಿರುಗುವುದು.ದರ್ಬೆ ಕಡೆಯಿಂದ ಬರುವ ಅಟೋ ರಿಕ್ಷಾಗಳು ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸಿ ಹಿಂದಿರುಗುವುದು.ಪರ್ಲಡ್ಕ – ಬಪ್ಪಳಿಗೆ ಕಡೆಯಿಂದ ಬರುವ ಅಟೋ ರಿಕ್ಷಾಗಳು ಕಿಲ್ಲೆ ಮೈದಾನದ ಬಳಿ ಪ್ರಯಾಣಿಕರನ್ನು ಇಳಿಸಿ ಹಿಂದಿರುಗುವುದು.


ಭಕ್ತಾದಿಗಳ ವಾಹನಗಳ ಪಾರ್ಕಿಂಗ್ ಸ್ಥಳ:
ಉಪ್ಪಿನಂಗಡಿ ಕೋಡಿಂಬಾಡಿ ಬನ್ನೂರು ಕಡೆಯಿಂದ ಬರುವ ಭಕ್ತರು ತಮ್ಮ ವಾಹನಗಳನ್ನು ಎಪಿಎಂಸಿ ಆವರಣ, ಕೊಂಬೆಟ್ಟು ಶಾಲಾ ಮೈದಾನ, ಬಂಟರ ಭವನ, ನೆಲ್ಲಿಕಟ್ಟೆ ಪ್ರಾಥಮಿಕ ಶಾಲಾ ಮೈದಾನದಲ್ಲಿ, ಮತ್ತು ಹಾರಾಡಿಯಿಂದ ಭಾರತ್ ಅಟೋಕಾರ‍್ಸ್ ಶೋ ರೂಮ್ ಪಕ್ಕದ ಜಾಗ, ಸಂಪ್ಯ- ಸುಳ್ಯ-ಬೆಟ್ಟಂಪಾಡಿ-ಪಾಣಾಜೆ – ಪರ್ಲಡ್ಕ-ಪುರುಷರಕಟ್ಟೆ ಕಡೆಯಿಂದ ಬರುವ ವಾಹನಗಳನ್ನು ತೆಂಕಿಲ ಗೌಡ ಸಮುದಾಯ ಭವನ, ತೆಂಕಿಲ ವಿವೇಕಾನಂದ ಶಾಲಾ ಮೈದಾನ, ಕಿಲ್ಲೆ ಮೈದಾನದಲ್ಲಿ, ವಿಟ್ಲ ಕಬಕ ನೆಹರುನಗರ ಕಡೆಯಿಂದ ಬರುವ ವಾಹನಗಳು ಜೈನ ಭವನದ ಪಾರ್ಕಿಂಗ್ ಜಾಗ, ಅಸ್ಮಿ ಲಾಡ್ಜ್ ಬಳಿಯ ಖಾಲಿ ಜಾಗ, ತೆಂಕಿಲ ದರ್ಶನ್ ಹಾಲ್ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡುವುದು.ಈ ಕುರಿತು ಇನ್ನಷ್ಟೆ ಅಽಕೃತ ಆದೇಶವಾಗಬೇಕಿದೆ ಎಂದು ಸಂಚಾರಿ ಪೊಲೀಸ್ ಠಾಣಾ ಮೂಲಗಳು ತಿಳಿಸಿವೆ.

ಇಂದು ಬಲ್ನಾಡು ಕಿರುವಾಳು ಆಗಮನ ಸಂದರ್ಭ ವಾಹನ ಸಂಚಾರದಲ್ಲಿ ವ್ಯತ್ಯಯ
ಏ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಕಿರುವಾಳು ಬರುವ ಸಂದರ್ಭ ಪುತ್ತೂರು ಬೈಪಾಸ್ ರಸ್ತೆಯಲ್ಲಿ ಸ್ವಲ್ಪ ಹೊತ್ತು ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು.ಬೈಪಾಸ್ ರಸ್ತೆಯಿಂದ ಭಂಡಾರ ತೆರಳಿದ ಬಳಿಕ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿಯ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು.ತುರ್ತು ವಾಹನಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here