ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯ ವಾರ್ಷಿಕೋತ್ಸವ

0

ಬದ್ಧತೆಯೂ ಜೀವನ ರೂಪಿಸಿ ಕೊಡಬಹುದು – ಕರ್ನಲ್ ಶರತ್ ಭಂಡಾರಿ

ಪುತ್ತೂರು: ಹಲವು ವರುಷಗಳಿಂದ ನಿರಂತರವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ, ಗ್ರಾಮೀಣ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ದಾರಿದೀಪವಾಗಿರುವ ವಿದ್ಯಾಮಾತಾ ಅಕಾಡೆಮಿಯು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿ, ಸುಳ್ಯದಲ್ಲೂ ತನ್ನ ಶಾಖೆಯನ್ನು ಪ್ರಾರಂಭಿಸಿ, ಸೇವೆ ಆರಂಭಿಸಿ, ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ.


ಸುಳ್ಯ ಶಾಖೆಯಲ್ಲಿ ನಡೆದ ಸರಳ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ನಿವೃತ್ತ ಸೈನಿಕರ ಸಂಘದ ಕಾರ್ಯದರ್ಶಿ ಕರ್ನಲ್ ಶರತ್ ಭಂಡಾರಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಹಾರೈಸಿ, ಮಾತನಾಡಿ, ʼಬದ್ಧತೆಯೆನ್ನುವ ಸೇವಾ ಮನೋಭಾವ, ಆದರ್ಶ ವಿಚಾರಧಾರೆಗಳು, ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ಇವೆಲ್ಲಾ ಯುವ ಜನತೆಗೆ ದಾರಿದೀಪವಾಗಿದ್ದು, ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ಯುವ ಪೀಳಿಗೆ ಇವನ್ನೆಲ್ಲಾ ಅರಿತುಕೊಂಡು ಜೀವನವನ್ನು ಉಜ್ವಲಗೊಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಅಕಾಡೆಮಿಯ ಸಾಧನೆಯನ್ನು ಸ್ಮರಿಸಿ, ಸಂಸ್ಥೆಯ ಕಾರ್ಯವೈಖರಿಗೆ ಹಾರೈಸಿದರು. TAPCMS ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ ದೇರಪ್ಪಜ್ಜನಮನೆ ಮಾತನಾಡಿ, ಯುವ ಜನತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿಶೇಷ ಅರಿವು ಮೂಡಿಸುತ್ತಿರುವಂತಹ ಕಾರ್ಯ ಪ್ರಶಂಸನೀಯ ಎಂದೇಳಿ, ಸಂಸ್ಥೆಯ ಏಳಿಗೆಗೆ ಹಾರೈಸಿದರು.


ಅಕಾಡೆಮಿಗೆ ಉತ್ತಮ ರೀತಿ ಸಹಕಾರ ನೀಡಿದ ಕರ್ನಲ್ ಶರತ್ ಭಂಡಾರಿ ಹಾಗೂ ವಿದ್ಯಾಮಾತಾ ಅಕಾಡೆಮಿ ಸುಳ್ಯ ಶಾಖೆಯ ಸಾರ್ವಜನಿಕ ಸಂಪರ್ಕಧಿಕಾರಿ ಹಾಗೂ ಅರೆಭಾಷೆ ಅಕಾಡೆಮಿಯ ಸದಸ್ಯರಾದ ಚಂದ್ರಾವತಿ ಬಡ್ಡಡ್ಕರವರನ್ನು ಗೌರವಿಸಲಾಯಿತು. ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಪ್ರಾಸ್ತವಿಕ ಮಾತನಾಡಿ, ಸಂಸ್ಥೆಯನ್ನು ಹುಟ್ಟುಹಾಕಿದ ಹಿನ್ನೆಲೆ ಮತ್ತು ಮುಂದಿನ ಹಲವಾರು ಯೋಜನೆಯ ಬಗ್ಗೆ ವಿವರಿಸಿದರು.


ಬಳಿಕ ಅಕಾಡೆಮಿಯ ತರಬೇತಿ ವರ್ಗ ಹಾಗೂ ಸಿಬ್ಬಂದಿ ವರ್ಗದವರನ್ನು ಗೌರವಿಸಲಾಯಿತು. ಸಾರ್ವಜನಿಕ ಸಂಪರ್ಕಧಿಕಾರಿ ಚಂದ್ರಾವತಿ ಬಡ್ಡಡ್ಕ ನಿರ್ವಹಿಸಿ, ಧನ್ಯವಾದವಿತ್ತರು.
ಆಡಳಿತಾಧಿಕಾರಿ ಚಂದ್ರಕಾಂತ್, ತರಬೇತುದಾರರಾದ ಉಷಾ,ಯಶಸ್ವಿನಿ ಹಾಗೂ ಪ್ರಸ್ತುತ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಿಥುನ್ ರೈ ಸಹಕರಿಸಿದರು. ಮುಂಜಾನೆ ಗಣ ಹೋಮ ಹಾಗೂ ಸಾಯಂಕಾಲ ದುರ್ಗಾ ನಮಸ್ಕಾರ ಪೂಜೆಯೂ ನೆರವೇರಿತು.

LEAVE A REPLY

Please enter your comment!
Please enter your name here