ಒಂದು ಕಾಲದಲ್ಲಿ ಆರ್ಥಿಕ ವ್ಯವಸ್ಥೆಯ ಕಾರಣಗಳಿಂದಾಗಿ ಪದವಿಯ ಮಟ್ಟದವರೆಗೆ ಕಲಿಯುವುದು ಕಷ್ಟವಾಗಿತ್ತು. ಆದ್ದರಿಂದ ಪದವಿ ಶಿಕ್ಷಣ ಪೂರೈಸಿದವರು ವಿರಳವಾಗಿದ್ದರು. ಪದವೀಧರರು ಎನಿಸಿದವರು ಸಮಾಜದ ಒಂದಲ್ಲ ಒಂದು ಕ್ಷೇತ್ರದಲ್ಲಿ ವಿಶೇಷ ಸ್ಥಾನಮಾನ ಗಳಿಸುತ್ತಿದ್ದರು. ಶಿಕ್ಷಣ ಸಾರ್ವರ್ತೀಕರಣದ ಫಲವಾಗಿ ಇಂದು ವೃತ್ತಿಪರ ಕೋರ್ಸು ಕಡೆಗೆ ಜನ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣಾವಸ್ಥೆಯ ಅತ್ಯುತ್ತಮ ಗ್ರೇಡ್ ಆದ ಪದವಿ ಶಿಕ್ಷಣದ ಕಡೆಗೆ ನಿರಾಸಕ್ತರಾಗುತ್ತಿದ್ದಾರೆ. ಇದರಿಂದ ಮುಂದೆ ಭವಿಷ್ಯದಲ್ಲಿ ಆಡಳಿತ, ಅಧಿಕಾರ ನಿರ್ವಹಣೆಯ ಯಾವುದೇ ಹುದ್ದೆಗೆ (ಉದಾ: ಐಎಎಸ್, ಐಪಿಎಸ್ ಇನ್ನಿತರ ಉನ್ನತ ಹುದ್ದೆ) ಅರ್ಹ ಅಭ್ಯರ್ಥಿಗಳು ದೊರಕದೇ ಸುಸ್ಥಿರ ಸಮಾಜ ನಿರ್ಮಾಣ ಕನಸಿನ ಮಾತಾಗಬಹುದು. ಯಾವುದೇ ಉನ್ನತ ಉತ್ತಮ ಹುದ್ದೆಗಳನ್ನು ಪಡೆಯಬೇಕಾದರೆ ಪದವಿ ಶಿಕ್ಷಣ ಅತ್ಯವಶ್ಯಕ ಎಂಬ ಸತ್ಯಾಂಶವನ್ನು ಇಂದಿನ ಪಿಯುಸಿ ಮಟ್ಟದ ವಿದ್ಯಾರ್ಥಿಗಳು ಬಹುಮುಖ್ಯವಾಗಿ ಅರಿತುಕೊಳ್ಳಬೇಕಾಗಿದೆ.
ಮೂವತ್ತು ವರ್ಷಗಳ ಹಿಂದೆ ಪ್ರಾರಂಭವಾದ ಬೆಟ್ಟಂಪಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರತಿ ವರ್ಷ ನೂರಾರು ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣದ ಅವಕಾಶವನ್ನು ನೀಡಿ ಸಮಾಜದ ವಿವಿಧ ಸ್ತರದ ಸ್ಥಾನಮಾನ, ಹುದ್ದೆ, ಉನ್ನತ ವ್ಯಾಸಂಗಕ್ಕೆ ಪ್ರೇರಣೆ ನೀಡಿದೆ. ಪ್ರಕೃತಿರಮಣೀಯವಾದ, ವಿಶಾಲವಾದ ಏಳೂವರೆ ಎಕರೆ ಜಾಗದಲ್ಲಿ ಉತ್ತಮವಾದ ಕಟ್ಟಡದಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಪ್ರಕೃತ ಮುನ್ನೂರಕ್ಕೂ ಮಿಕ್ಕು ವಿದ್ಯಾರ್ಥಿಗಳು ಬಿ.ಎ,.ಬಿ.ಎಸ್ಸಿ, ಬಿ.ಕಾಂ. ಬಿಬಿಎ ಮತ್ತು ಬಿ.ಎಸ್.ಡಬ್ಯ್ಲೂಪದವಿಗಳಲ್ಲಿ ವ್ಯಾಸಂಗನಿರತರಾಗಿದ್ದಾರೆ. ಕಳೆದೊಂದು ದಶಕದಲ್ಲಿ ಮೂರು ಪದವಿ ರ್ಯಾಂ ಕ್ಗಳೂ ಸೇರಿದಂತೆ ಶೈಕ್ಷಣಿಕವಾಗಿ ಈ ಸಂಸ್ಥೆಯು ಗುರುತಿಸಿಕೊಂಡ ಬಗೆ ವಿಶೇಷವಾದುದು. ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಈ ಸಂಸ್ಥೆಯು ಪೂರ್ಣವಾಗಿ ಸರಕಾರಿ ಸಂಸ್ಥೆಯಾಗಿದ್ದು ಇಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಕನಿಷ್ಠ ಶುಲ್ಕದಲ್ಲಿ ಉನ್ನತ ಶಿಕ್ಷಣ ಸೌಲಭ್ಯವನ್ನು ಒದಗಿಸಲಾಗಿದೆ.
2022ರಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ.ಅಶ್ವತ್ಥನಾರಾಯಣ ಅವರು ಈ ಕಾಲೇಜಿಗೆ ಭೇಟಿ ನೀಡಿ, ಕಾಲೇಜಿನಲ್ಲಿರುವ ಶೈಕ್ಷಣಿಕ ವಾತಾವರಣವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಇನ್ಸಿಸ್ ಸ್ಪ್ರಿಂಗ್ಬೋರ್ಡ್ನಂತಹ ಆನ್ಲೈನ್ ಶಿಕ್ಷಣದ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳುವುದು, ಎಲ್ ಎಂಎಸ್ ನಂತಹ ಆನ್ಲೈನ್ ಶಿಕ್ಷಣದ ಸಾಧ್ಯತೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿರುವುದು, ಸ್ಮಾರ್ಟ್ಕ್ಲಾಸ್ ರೂಂಗಳನ್ನು ಹೊಂದಿರುವುದು, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿರುವುದು ಇವೆಲ್ಲವನ್ನೂ ಸಚಿವರು ಶ್ಲಾಘಿಸಿದ್ದರು. ಹಿಂದೆ ಶಿಕ್ಷಣ ಸಚಿವರಾಗಿದ್ದ ದಿವಂಗತ ಡಾ.ವಿ.ಎಸ್. ಆಚಾರ್ಯ ಅವರೂ ಈ ಕಾಲೇಜಿಗೆ ಭೇಟಿಕೊಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅನೇಕ ವಿಜ್ಞಾನಿಗಳೂ, ಶಿಕ್ಷಣ ತಜ್ಞರೂ, ಸಾಹಿತಿಗಳೂ ಆಗಾಗ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಉಧ್ದೇಶಿಸಿ ಸಂವಾದಗಳನ್ನು ನಡೆಸುತ್ತಿದ್ದಾರೆ.
ಅತ್ಯಾಧುನಿಕ ಗ್ರಂಥಾಲಯ ಮತ್ತು ಪ್ರಯೋಗಾಲಯ: ಅತ್ಯಾಧುನಿಕ ವ್ಯವಸ್ಥೆಗಳಿರುವ ಗ್ರಂಥಾಲಯ ವಿದ್ಯಾರ್ಥಿಗಳ ಜ್ಞಾನದಾಹ ಇಂಗಿಸುತ್ತಿದೆ. ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗಿರುವ ಸುಸಜ್ಜಿತ ಭೌತಶಾಸ್ತ್ರ, ರಸಾಯನಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಗಣಿತಶಾಸ್ತ್ರ ಪ್ರಯೋಗಾಲಯಗಳು ಇಲ್ಲಿವೆ. ಕಾಲೇಜು ಸಂದರ್ಶಿಸುವವರೆಲ್ಲರೂ ಇಲ್ಲಿಗೆ ಭೇಟಿ ಕೊಟ್ಟೇ ಮರಳುತ್ತಾರೆ. ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಈ ಪ್ರಯೋಗಾಲಯಗಳ ಬಗ್ಗೆ ಮೆಚ್ಚಿಗೆಯ ಮಾತುಗಳನ್ನಾಡಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೂ ಕಂಪ್ಯೂಟರ್ ಬಳಕೆಯ ಸೌಲಭ್ಯವನ್ನು ಒದಗಿಸಲಾಗಿದೆ.
ಉದ್ಯೋಗ ಮಾರ್ಗದರ್ಶನ: ಪದವಿಯ ನಂತರ ವಿದ್ಯಾರ್ಥಿಗಳಿಗೆ ಉದ್ಯೋಗಕ್ಷೇತ್ರದ ವಿವಿಧ ಅವಕಾಶಗಳ ಬಗ್ಗೆ ನಿರಂತರ ಮಾಹಿತಿ ನೀಡಲಾಗುತ್ತದೆ. ಸಾಪ್ಟ್ ಸ್ಕಿಲ್/ಜಾಬ್ ಸ್ಕಿಲ್ ತರಬೇತಿಗಳನ್ನೂ ನೀಡಲಾಗುತ್ತಿದೆ ಪ್ಲೇಸ್ಮೆಂಟ್ ಸೆಲ್ ಸಕ್ರಿಯವಾಗಿದ್ದು ಉದ್ಯೋಗಮೇಳ, ವಿವಿಧ ಸಂಸ್ಥೆಗಳಿಗೆ ಭೇಟಿ ಮತ್ತಿತರ ಚಟುವಟಿಕೆಗಳನ್ನು ನಡೆಸುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಪದವಿ ಮುಗಿಸಿದ ಬಳಿಕ ದೊಡ್ಡ ಸಂಖ್ಯೆಯಲ್ಲಿ ಉನ್ನತ ವ್ಯಾಸಂಗವನ್ನು ಆಯ್ಕೆ ಮಾಡಿಕೊಳ್ಳುವುದು ಇಲ್ಲಿನ ವಿಶೇಷ. ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳಲ್ಲೂ, ಆಸುಪಾಸಿನ ಎಲ್ಲ ಸ್ನಾತಕೋತ್ತರ ಕೇಂದ್ರಗಳಲ್ಲೂ ಬೆಟ್ಟಂಪಾಡಿಯ ವಿದ್ಯಾರ್ಥಿಗಳು ಪ್ರವೇಶ ಪಡೆದು ಉನ್ನತ ಸ್ಥಾನಮಾನಗಳನ್ನು ಗಳಿಸುತ್ತಿದ್ದಾರೆ.
ನ್ಯಾಕ್ ನಿಂದ ಅತ್ಯುತ್ತಮ ಗ್ರೇಡ್ ಅಂಕಗಳು: ಪದವಿ ಕಾಲೇಜುಗಳ ಗುಣಮಟ್ಟವನ್ನು ಪರಿಶೀಲಿಸಿ ವಿಶಿಷ್ಟ ಅಂಕಗಳ ಮೂಲಕ ಗ್ರೇಡ್ ನೀಡುವ ‘ನ್ಯಾಕ್’ ಸಂಸ್ಥೆಯವರು ಕಾಲೇಜಿಗೆ ಭೇಟಿ ನೀಡಿ ದಾಖಲೆಗಳನ್ನೆಲ್ಲ ಕೂಲಂಕುಷವಾಗಿ ಪರಿಶೀಲಿಸಿ 2.73 ಅಂಕಗಳೊಂದಿಗೆ ‘ಬಿ+’ಗ್ರೇಡ್ ನೀಡಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪರಿಸರದ ಕಾಲೇಜೊಂದಕ್ಕೆ ಈ ಬಗೆಯ ಅತ್ಯುತ್ತಮ ಗ್ರೇಡ್ ದೊರಕಿರುವುದು ಇದೇ ಮೊದಲು.
ಉತ್ತಮ ಬೋಧಕ ವರ್ಗ ಮತ್ತು ಫಲಿತಾಂಶ: ಡಾ. ವರದರಾಜ ಚಂದ್ರಗಿರಿ ಅವರು ಪ್ರಾಂಶುಪಾಲರಾಗಿದ್ದುಕೊಂಡು, 17 ಮಂದಿ ಪೂರ್ಣಾವಧಿ ಉಪನ್ಯಾಸಕರು ಮತ್ತು ಹದಿಮೂರು ಮಂದಿ ಅತಿಥಿ ಉಪನ್ಯಾಸಕರನ್ನು ಒಳಗೊಂಡ ಅತ್ಯುತ್ತಮ ಶಿಕ್ಷಕ ವರ್ಗ ಇಲ್ಲಿದೆ. ಅದರ ಪರಿಣಾಮವೆಂಬಂತೆ ಪ್ರತಿವರ್ಷ ಸರಾಸರಿ 90-95% ಫಲಿತಾಂಶವನ್ನು ದಾಖಲಿಸುತ್ತಿದ್ದು, ಶೈಕ್ಷಣಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಕನಿಷ್ಠ ಶುಲ್ಕ: ಇದೊಂದು ಸರ್ಕಾರಿ ಸಂಸ್ಥೆಯಾಗಿದ್ದು ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ನಿಗದಿಪಡಿಸಿದ ಶುಲ್ಕವನ್ನಷ್ಟೇ ವಿದ್ಯಾರ್ಥಿಗಳಿಂದ ಪಡೆಯಲಾಗುತ್ತದೆ. ಎಲ್ಲ ವಿದ್ಯಾರ್ಥಿನಿಯರಿಗೂ ಸರ್ಕಾರಿ ಶುಲ್ಕದಿಂದ ವಿನಾಯಿತಿ ಇದೆ. ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸುವ ಸಲುವಾಗಿಯೇ ತಾವು ಕಟ್ಟಿದ ಶುಲ್ಕವನ್ನೂ ವರ್ಷದ ಕೊನೆಯಲ್ಲಿ ಹಿಂತಿರುಗಿಸುವ ‘ಶುಲ್ಕ ಮರುಪಾವತಿ ಯೋಜನೆ’ಯನ್ನೂ ಸರ್ಕಾರವು ಜಾರಿ ಮಾಡಿದೆ. ಇವಲ್ಲದೆ ಒಂದಲ್ಲ ಒಂದು ಬಗೆಯ ಸ್ಕಾಲರ್ಶಿಪ್ ಗಳು ಎಲ್ಲ ವಿದ್ಯಾರ್ಥಿಗಳಿಗೂ ದೊರಕುವಂತೆ ಅವಕಾಶವನ್ನು ಮಾಡಿಕೊಡಲಾಗುತ್ತದೆ.
ನಿರಂತರ ಶೈಕ್ಷಣಿಕ ಚಟುವಟಿಕೆಗಳು: ಸುಸಜ್ಜಿತ ಸಭಾಂಗಣವನ್ನು ಹೊಂದಿರುವ ಕಾಲೇಜಿನಲ್ಲಿ ನಿರಂತರ ಶೈಕ್ಷಣಿಕ ಚಟವಟಿಕೆಗಳು ನಡೆಯುತ್ತಿರುತ್ತವೆ. ಇಂತಹ ಪಠ್ಯಪೂರಕ ಮತ್ತು ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ವಿಪುಲವಾದ ಅವಕಾಶವನ್ನು ಒದಗಿಸುತ್ತವೆ. ರಾಷ್ಟೀಯ ಸೇವಾ ಯೋಜನೆ, ರೊವರ್ಸ್ ರೇಂಜರ್ಸ್ ರೆಡ್ಕ್ರಾಸ್ ಮುಂತಾದ ಸಂಸ್ಥೆಗಳು ಸಕ್ರಿಯವಾಗಿವೆ. ಕಾಲೇಜಿನ ಯಕ್ಷಗಾನ ಸಂಘವಂತೂ ಯಕ್ಷಗಾನ ವಲಯದಲ್ಲಿ ಚಿರಪರಿಚಿತವಾಗಿವೆ. ಪ್ರತಿ ವರ್ಷವೂ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಖ್ಯಾತ ಭಾಗವತರಾದ ಕಾವ್ಯಶ್ರೀ ಅಜೇರು ಅವರಂತಹ ಯಕ್ಷಗಾನ ಕಲಾವಿದರು ಇದೇ ಸಂಘದಲ್ಲಿ ಬೆಳೆದವರಾಗಿದ್ದಾರೆ.
ವಿದ್ಯಾರ್ಥಿನಿಯರಿಗೆ ಉಚಿತ ಹಾಸ್ಟೆಲ್ ಸೌಲಭ್ಯ: ಕಾಲೇಜು ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂದೇ ಕೆಲವು ವರ್ಷಗಳ ಹಿಂದ ಬೆಟ್ಟಂಪಾಡಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಂಪೂರ್ಣ ಉಚಿತವಾಗಿ ಮಹಿಳಾ ಹಾಸ್ಟೆಲ್ ತೆರೆಯಲಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಹಲವು ವಿದ್ಯಾರ್ಥಿನಿಯರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.
2025-26ನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾತಿ ಆರಂಭ: ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಗಳು ಆರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳೂ ಪೋಷಕರೂ ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ. ಸಂಪರ್ಕ ಸಂಖ್ಯೆ 9448887348 (ಪ್ರಾಂಶುಪಾಲರು) ಅಥವಾ 9845598194 (ಕಛೇರಿ)
ಕನಿಷ್ಠ ಶುಲ್ಕದಲ್ಲಿ ಉನ್ನತ ಶಿಕ್ಷಣ: ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿಬಿಎ ಮತ್ತು ಬಿ.ಎಸ್.ಡಬ್ಲ್ಯೂ ವ್ಯಾಸಂಗ, ಅತ್ಯಾಧುನಿಕ ಗ್ರಂಥಾಲಯ, ಪ್ರಯೋಗಾಲಯ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗಾಗಿ ಪಠ್ಯಪೂರಕ, ಪಠ್ಯೇತರ ಕಾರ್ಯಾಗಾರ, ವಿದ್ಯಾರ್ಥಿನಿಯರಿಗೆ ಉಚಿತ ಹಾಸ್ಟೆಲ್ ಸೌಲಭ್ಯ.