ಕೊಯ್ಯೂರು : ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ 2021-22ನೇ ಸಾಲಿನ ಸರ್ವಸದಸ್ಯರ ಸಾಮಾನ್ಯ ಸಭೆ ಸೆ.25 ರಂದು ಮಲೆಬೆಟ್ಟು ವನದುರ್ಗ ದೇವಸ್ಥಾನದ ವನ ಶ್ರೀ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ಎಚ್. ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘವು ಆರ್ಥಿಕ ವರ್ಷದಲ್ಲಿ ನಿವ್ವಳ ರೂ.7,71,649/ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.20 ಡಿವಿಡೆಂಟ್ ಹಾಗೂ ಹಾಲು ಹಾಕುವ ಸದಸ್ಯರಿಗೆ ಲಾಭಂಶದಲ್ಲಿ ಶೇ.65 ಬೋನಸ್ ಘೋಷಣೆ ಮಾಡಲಾಯಿತು.
ಸಭೆಯಲ್ಲಿ ಶೇ.80 ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪುರಸ್ಕಾರ, 4 ಮಂದಿ ಸದಸ್ಯರಿಗೆ ಆರ್ಥಿಕ ಧನ ಸಹಾಯ ನೀಡಲಾಯಿತು. ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಮತ್ತು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಚಂದ್ರಶೇಖರ್ ಭಟ್ ಗುಣ ಮಟ್ಟದ ಹಾಲು ಮತ್ತು ಇಲಾಖೆಯಿಂದ, ಸರಕಾರದಿಂದ ಸಿಗುವ ಸವಲತ್ತು ಕುರಿತು ಮಾಹಿತಿ ನೀಡಿದರು. ಅಧ್ಯಕ್ಷ ಪ್ರಮೋದ್ ಕುಮಾರ್ ಮಾತನಾಡಿ ಸಂಘಕ್ಕೆ ನೂತನ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಇದ್ದು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯನ್ನು ದೀಪ ಬೆಳಗಿಸುವ ಮೂಲಕ ಆರಂಭಿಸಲಾಯಿತು. ಬಳಿಕ ಇತ್ತೀಚೆಗೆ ನಿಧನರಾದ ಕಾರ್ಯದರ್ಶಿಯಾಗಿದ್ದ ರಘುಚಂದ್ರ ಹಾಗೂ ಸಕ್ರಿಯ ಸದಸ್ಯರಾದ ದಿನೇಶ ಪೂಜಾರಿ ಉಪ್ಪಾರು, ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಉಪಾಧ್ಯಕ್ಷ ಗಂಗಯ್ಯ ಗೌಡ, ನಿರ್ದೇಶಕರುಗಳಾದ ಶೇಷಪ್ಪ, ಜಯಂತ ಗೌಡ, ಅಣ್ಣಿ ಪೂಜಾರಿ, ದಾಮೋದರ ಗೌಡ, ಉದಯ ಕುಮಾರ್, ಪುಷ್ಪರಾಜ್, ಚಿತ್ರಾ, ಲಕ್ಷ್ಮೀ, ಪ್ರವೀಣ್ ಕುಮಾರ್, ಸಂಜೀವ ಮಲೆಕುಡಿಯ, ನಾರಾಯಣ ನೀರಕಜೆ, ಸದಸ್ಯರು ಹಾಜರಿದ್ದರು, ಕಾರ್ಯದರ್ಶಿ ರೇಷ್ಮಾ ವರದಿ ವಾಚಿದರು, ನಿರ್ದೇಶಕ ಪುಷ್ಪರಾಜ್ ಸ್ವಾಗತಿಸಿ, ದಾಮೋದರ ಗೌಡ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.