ವೇಣೂರು: ಬೆಳ್ತಂಗಡಿ ತಾಲೂಕಿಗೆ ಒಂದು ಸುಸಜ್ಜಿತವಾದ ಕ್ರೀಡಾಂಗಣದ ಅಗತ್ಯವಿದ್ದು, ಈ ಬಗ್ಗೆ ಶ್ರಮವಹಿಸಲಾಗುವುದು ಎಂದು ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಂ ಹೇಳಿದರು.
ದ.ಕ.ಜಿ.ಪಂ. ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಗ್ರಾ.ಪಂ. ಹೊಸಂಗಡಿ, ತಾಲೂಕು ಕ್ರೀಡಾಕೂಟ ಸಂಘಟನ ಸಮಿತಿ ಪೆರಿಂಜೆ, ಪೆರಿಂಜೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ಪೆರಿಂಜೆ ಸ.ಹಿ.ಪ್ರಾ. ಶಾಲೆಯ ಮೈದಾನದಲ್ಲಿ ಜರಗಿದ ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದವರು ಗ್ರಾಮೀಣ ಭಾಗದವರೇ ಅನ್ನುವುದನ್ನು ನಾವು ಮನಗಾಣಬೇಕಿದೆ. ಕೀಳರಿಮೆ ಬಿಟ್ಟು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡಾಕ್ಷೇತ್ರಕ್ಕೆ ಸಹಕಾರ ಮತ್ತು ಪ್ರೋತ್ಸಾಹ ನಿರಂತರವಾಗಿದೆ ಎಂದರು.
ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಕರುಣಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುವನೇಶ್ ಮಾತನಾಡಿ, ಅತ್ಯಂತ ಪರಿಪೂರ್ಣತೆ ಮತ್ತು ಯಶಸ್ವಿಯಾಗಿ ಈ ಕ್ರೀಡಾಕೂಟ ನಡೆದಿದೆ. ಇದಕ್ಕೆ ಲಭಿಸಿದ ಸಹಕಾರ ಅದ್ಭುತವಾಗಿದ್ದು, ಪೆರಿಂಜೆ ಅತ್ಯಂತ ಪವಿತ್ರಭೂಮಿಯಾಗಿದೆ ಎಂದರು.
ಪೆರಾಡಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಪೆರಿಂಜೆ ಹಾಲು ಉ.ಸ. ಸಂಘದ ಅಧ್ಯಕ್ಷ ಸುಧಾಕರ ನೂಯಿ, ಪ್ರಸನ್ನಾ ಆರ್. ಹೆಗ್ಡೆ, ಉದ್ಯಮಿ ಅಖ್ತರ್ ಅಹಮ್ಮದ್ ಹಾಸ್ಕೋ, ದ.ಕ. ಜಿಲ್ಲಾ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ನಿರ್ದೇಶಕ ಎನ್. ಸೀತಾರಾಮ ರೈ, ಜಯರಾಜ್ ಜೈನ್, ಸಿಆರ್ಪಿ ಆರತಿ, ಗ್ರಾ.ಪಂ. ಉಪಾಧ್ಯಕ್ಷೆ ನಾಗರತ್ನ, ಕ್ರೀಡಾಕೂಟ ಸಂಘಟನ ಸಮಿತಿ ಅಧ್ಯಕ್ಷ ಎಚ್. ಆಲಿಯಬ್ಬ, ಪೆರಿಂಜೆ ಶಾಲೆಯ ಮುಖ್ಯಶಿಕ್ಷಕಿ ವಸಂತಿ ಕೆ., ಎಸ್ಡಿಎಂಸಿ ಅಧ್ಯಕ್ಷ ಪ್ರಶಾಂತ್, ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾ ನಾಯ್ಕ್, ಮತ್ತಿತರರು ಉಪಸ್ಥಿತರಿದ್ದರು. ಕ್ರೀಡಾಕೂಟಕ್ಕೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಕ್ರೀಡಾಕೂಟ ಸಂಘಟನ ಸಮಿತಿಯ ಕೋಶಾಧಿಕಾರಿ ಹೇಮಾವಸಂತ್ ಸ್ವಾಗತಿಸಿ, ಕಾರ್ಯದರ್ಶಿ ವಿಶ್ವನಾಥ ಗೌಡ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಜೈನ್ ಕೊಕ್ರಾಡಿ ನಿರೂಪಿಸಿದರು.