ಪುತ್ತೂರು: ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಕೇರಳ ಸರಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಪುತ್ತೂರು ಬಿಲ್ಲವ ಸಂಘದ ನೇತೃತ್ವದಲ್ಲಿ ಜ.26ರಂದು ಬೆಳಿಗ್ಗೆ 9.30ಕ್ಕೆ ದರ್ಬೆ ವೃತ್ತದಿಂದ ಬಪ್ಪಳಿಗೆ ಗುರುಮಂದಿರ ತನಕ ಸ್ತಬ್ಧ ಚಿತ್ರದೊಂದಿಗೆ ಮೆರವಣಿಗೆ ನಡೆಯಲಿದೆ.
ಪ್ರಮುಖರಾದ ಸೀತಾರಾಮ ರೈ ಸವಣೂರು, ರೆ. ವಿಜಯ ಹಾರ್ವಿನ್, ಚಿದಾನಂದ ಬೈಲಾಡಿ, ಭಾಸ್ಕರ್ ಆಚಾರ್ ಹಿಂದಾರು, ಡಾ. ರಘು ಬೆಳ್ಳಿಪ್ಪಾಡಿ ಸಹಿತ ಹಲವರು ಭಾಗವಹಿಸಲಿದ್ದಾರೆ.
ಮೆರವಣಿಗೆ ಬಳಿಕ ಗುರುಮಂದಿರದಲ್ಲಿ ಪೂಜೆ ನಡೆಯಲಿದೆ. ಬಳಿಕ ಕುದ್ರೋಳಿಯಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪುತ್ತೂರಿನಿಂದ ಭಾಗವಹಿಸಲಿದ್ದಾರೆ. ಬಿಲ್ಲವ ಸಂಘದ ಎಲ್ಲಾ 51 ಗ್ರಾಮ ಸಮಿತಿ, ಮಹಿಳಾ ಸಮಿತಿ ಮತ್ತು ಯುವವಾಹಿನಿಯ ಎಲ್ಲಾ ಮಾಜಿ, ಹಾಲಿ ಅಧ್ಯಕ್ಷರು, ನಿರ್ದೇಶಕರು, ಪದಾಧಿಕಾರಿಗಳು ಸಹಿತ ನಾಡಿನ ಎಲ್ಲಾ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ತಿಳಿಸಿದ್ದಾರೆ.