ಪುತ್ತೂರು: ಚಿನ್ನದ ಮೇಲೆ ಹಣ ಹೂಡಿಕೆ ಮಾಡಿ ಲಾಭಾಂಶ ನೀಡುವುದಾಗಿ ಭರವಸೆ ನೀಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಆರೋಪಿ ರಾಜಕೀಯ ಪಕ್ಷವೊಂದರ ನಗರ ಸಮಿತಿಯ ಮಾಜಿ ಅಧ್ಯಕ್ಷನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪುತ್ತೂರು ಪ್ರಧಾನ ಸಿವಿಲ್ ನ್ಯಾಯಾಲಯ ಹಿರಿಯ ವಿಭಾಗ ಮತ್ತು ಎ ಸಿ ಜೆ ಎಮ್ ನ್ಯಾಯಾಧೀಶರು ಪುತ್ತೂರು ನಗರ ಪೊಲೀಸ್ ಠಾಣೆಗೆ ಆದೇಶ ನೀಡಿದ್ದಾರೆ.
ಎಸ್ ಡಿ ಪಿ ಐ ರಾಜಕೀಯ ಪಕ್ಷದ ಪುತ್ತೂರು ನಗರದ ಮಾಜಿ ಅಧ್ಯಕ್ಷ ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಪೈಸಾರಿ ನಿವಾಸಿ ಅಬ್ದುಲ್ ಬಶೀರ್ ಇಬ್ರಾಹಿಂ ಅವರು ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಿ. ಬನ್ನೂರು ನಿವಾಸಿ ಬಿ ಮಹಮ್ಮದ್ ಹನೀಫ್ ಎಂಬವರು ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿನಂತೆ ಚಿನ್ನದ ಮೇಲೆ ಹಣ ಹೂಡಿಕೆ ಮಾಡಿ ಲಾಭಾಂಶ ಕೊಡುವುದಾಗಿ ಹೇಳಿ ರೂ.38,50,000 ಹಣ ಪಡೆದು ಲಾಭಾಂಶ ನೀಡದೇ, ಸಂಪರ್ಕಕ್ಕೂ ಸಿಗದೇ ಅಬ್ದುಲ್ ಬಶೀರ್ ಇಬ್ರಾಹಿಂ ಅವರು ವಂಚಿಸಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದಾರೆ. ವಂಚನೆಗೊಳಗಾದ ವ್ಯಕ್ತಿಯ ಖಾಸಗಿ ದೂರಿನ ವಾದ ಮಂಡನೆ ಆಲಿಸಿದ ನ್ಯಾಯಾಲಯ ಆರೋಪಿ ಅಬ್ದುಲ್ ಬಶೀರ್ ಇಬ್ರಾಹಿಂ ರವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಮಾಡಲು ಪುತ್ತೂರು ನಗರ ಪೊಲೀಸ್ ಠಾಣೆಗೆ ಆದೇಶ ನೀಡಿದೆ. ಆರೋಪಿ ರಾಜಕೀಯ ಮುಖಂಡನಾಗಿದ್ದು, ಈ ಹಿಂದೆ ಪುತ್ತೂರಿನ ಎರಡು ಚಿನ್ನದ ಅಂಗಡಿಯಲ್ಲಿ ಕೆಲಸಕ್ಕಿದ್ದು ನಂತರ ಸ್ವತಂತ್ರವಾಗಿ ವ್ಯವಹಾರ ಮಾಡುತ್ತಾ ಚಿನ್ನವನ್ನು ಹರಾಜಿನಲ್ಲಿ ಪಡೆದು ಉತ್ತಮ ದರಕ್ಕೆ ಮಾರಾಟ ಮಾಡಿ ಹಣ ಗಳಿಸಬಹುದೆಂದು ಫಿರ್ಯಾದುದಾರರನ್ನು ನಂಬಿಸಿ ಹಣ ಪಡೆದು ವಂಚಿಸಿರುತ್ತಾರೆ. ಈ ಬಗ್ಗೆ ವಂಚನೆಗೊಳಗಾದ ವ್ಯಕ್ತಿ ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿನಲ್ಲಿ ನ್ಯಾಯಾಲಯ ಈ ಆದೇಶ ಮಾಡಿದೆ. ದೂರುದಾರರ ಪರವಾಗಿ ಎಚ್ & ಡಿ ಲೀಗಲ್ನ ನ್ಯಾಯವಾದಿಗಳಾದ ಹರೀಶ್ ಕುಮಾರ್ ಬಳಕ್ಕ, ದೀಪಕ್ ಬೊಳುವಾರು, ಬಬಿತಾ ಬಂಗೇರ, ಅಕ್ಷತಾ ಬನಾರಿ ವಾದಿಸಿದ್ದರು.