ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹೋತಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದ ದೋಷಗಳಿಗೆ ದೈವಜ್ಞರು ಸೂಚಿಸಿದ ಪರಿಹಾರಗಳ ಕುರಿತು ಫೆ. 11ರಂದು ನಿವೃತ್ತಿ ರಾಶಿ ನಡೆಯಲಿದ್ದು, ಅಷ್ಟಮಂಗಲ ಪರಿಹಾರ ‘ನಿವೃತ್ತಿ ನಿಧಿ’ ಸಂಚಯನಕ್ಕೆ ಅದೇ ದಿನ ದೈವಜ್ಞರು ಚಾಲನೆ ನೀಡಲಿದ್ದಾರೆ.
ನಿವೃತ್ತಿ ನಿಧಿ ಸಂಚಯನ ಮಧ್ಯಾಹ್ನ ಗಂಟೆ ೩ಕ್ಕೆ ನಡೆಯಲಿದ್ದು, ಭಗವದ್ಭಕ್ತರು ಈ ಕಾರ್ಯದಲ್ಲಿ ಭಾಗವಹಿಸುವುದು ಉತ್ತಮ ಎಂದು ದೈವಜ್ಞರು ನುಡಿದಿದ್ದಾರೆ. ದೇವಳದ ಅಡಳಿತ ವರ್ಗ, ಅರ್ಚಕ ವೃಂದ, ನೌಕರ ವೃಂದ, ನಿತ್ಯ ಕರಸೇವಕ ವೃಂದ ಮತ್ತು ಹತ್ತೂರಿನ ಭಕ್ತಾದಿಗಳೆಲ್ಲರೂ ಸೇರಿ ದೇವರ ಸಮ್ಮುಖದಲ್ಲಿ ತಮ್ಮ ಇಚ್ಚಾನುಸರ ಕಾಣಿಕೆ ಸಮರ್ಪಣೆಗೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮತ್ತು ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿಯವರು ತಿಳಿಸಿದ್ದಾರೆ.