ಪುತ್ತೂರು: ಪುತ್ತೂರು-ಉಪ್ಪಿನಂಗಡಿ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಎದುರಾಗಿರುವ ಧೂಳಿನ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ಕೋಡಿಂಬಾಡಿಯಲ್ಲಿ ಫೆ.10ರಂದು ಪ್ರತಿಭಟನೆ ನಡೆಯಿತು. ಕಾಮಗಾರಿ ಸಂದರ್ಭದಲ್ಲಿನ ವಿಪರೀತ ಧೂಳಿನಿಂದಾಗಿ ಗ್ರಾಮಸ್ಥರಿಗೆ, ರೈತರಿಗೆ ಹಾಗೂ ನಿತ್ಯ ಸಂಚರಿಸುವವರಿಗೆ ತೊಂದರೆಯಾಗುತ್ತಿದೆ, ಆದ್ದರಿಂದ ಕೂಡಲೇ ಈ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಮತ್ತು ಬೆಳ್ಳಿಪ್ಪಾಡಿ, ಕೋಡಿಂಬಾಡಿ, ಶಾಂತಿನಗರದ ನಾಗರಿಕರ ನೇತೃತ್ವದಲ್ಲಿ ಕೋಡಿಂಬಾಡಿಯ ವಿನಾಯಕನಗರದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಮೋದ್ ಪ್ರತಿಭಟನೆಯ ವೇಳೆ ಮಾತನಾಡಿ, ಈ ಹಿಂದೆ ಧೂಳು ಬಾರದಂತೆ ನೀರು ಸಿಂಪಡಣೆ ಮಾಡಲಾಗಿತ್ತು, ವಾಹನ ಸವಾರರು ಬಿದ್ದ ನಂತರ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಊರಿನವರ ಆಗ್ರಹದಂತೆ ಮತ್ತೆ ನೀರು ಹಾಕಿ ಧೂಳು ಏಳದಂತೆ ಕ್ರಮ ಕೈಗೊಳ್ಳಲಾಗುವುದು ಜೊತೆಗೆ ಇನ್ನಿತರ ಸಮಸ್ಯೆಗಳಾದ ಪರಿಹಾರ ಧನ ನೀಡುವುದು, ತಡೆಗೋಡೆ ನಿರ್ಮಾಣದ ಬಗೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೋಡಿಂಬಾಡಿ ಗ್ರಾ.ಪಂ ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ, ಜಯಪ್ರಕಾಶ್ ಬದಿನಾರು, ಕಾಂಗ್ರೆಸ್ ಮುಖಂಡ ಮುರಳೀಧರ ರೈ ಮಠಂತಬೆಟ್ಟು, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಸುರೇಶ್ ಭಟ್ ಕೊಜಂಬೆ,ಗೌರವಾಧ್ಯಕ್ಷ ಹರ್ಷೇಂದ್ರ ಕುಮಾರ್ ಹೆಗ್ಡೆ ಪಚ್ಚಾಡಿ, ಜಿಲ್ಲಾ ಸಂಚಾಲಕ ರೂಪೇಶ್ ರೈ, ಕೋಡಿಂಬಾಡಿ ವಲಯ ಅಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಬೆಳ್ಳಿಪ್ಪಾಡಿ ವಲಯ ಅಧ್ಯಕ್ಷ ಮಾರ್ಷೆಲ್ ವೇಗಸ್, ವಕೀಲ ಕುಮಾರನಾಥ, ವಾರಿಸೇನ ಜೈನ್, ಯತೀಶ್ ಶೆಟ್ಟಿ, ಯೋಗೀಶ್ ಸಾಮಾನಿ, ಕಾರ್ತಿಕ್ ಬೆಳ್ಳಿಪ್ಪಾಡಿ, ಹುಸೈನ್ ಹಾಜಿ ಕೆ.ಬಿ.ಕೆ, ಪ್ರಭಾಕರ ಸಾಮಾನಿ, ಸುರೇಶ್ ಶೆಟ್ಟಿ,ದಾವೂದ್ ಕೆ, ಅಣ್ಣು ಪೂಜಾರಿ, ಶಿವಪ್ರಸಾದ್ ರೈ, ಹರೀಶ್ ಮಠಂತಬೆಟ್ಟು, ಗುತ್ತಿಗೆದಾರರಾದ ಪೃಥ್ವಿರಾಜ್ ಮತ್ತಿತರರು ಉಪಸ್ಥಿತರಿದ್ದರು.