ಪುತ್ತೂರು: ಇತಿಹಾಸಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ೨೦೨೦ರ ಏಪ್ರಿಲ್ ೧ರಂದು ಸಾಂಪ್ರದಾಯಿಕ ಜಾತ್ರೆಗೆ ನಡೆದಿದ್ದ ಗೊನೆಮುಹೂರ್ತದ ವಿಡಿಯೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ಪ್ರಕರಣದ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಕೋವಿಡ್ ಸಂದರ್ಭದಲ್ಲಿ ಕೋವಿಡ್ ನಿಯಮ ಪಾಲನೆಯೊಂದಿಗೆ ಜಾತ್ರೆಗೆ ಗೊನೆಮುಹೂರ್ತ ನಡೆದಿತ್ತು.ಆದರೆ ಈ ಕುರಿತ ವಿಡಿಯೋವನ್ನು ವಿದೇಶದಲ್ಲಿ ನೆಲೆಸಿದ್ದ ವಿದ್ಯಾಪುರದ ಮಹಮ್ಮದ್ ಖಲಂದರ್ ಎಂಬವರು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು.ಈ ಕುರಿತು ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ಪೊಲೀಸರಿಗೆ ದೂರು ನೀಡಿದ್ದರು.ವಿದೇಶದಲ್ಲಿದ್ದ ಆರೋಪಿಯು ಊರಿಗೆ ಬರುತ್ತಿದ್ದುದನ್ನು ಖಚಿತಪಡಿಸಿಕೊಂಡಿದ್ದ ಪೊಲೀಸರು ಆತನನ್ನು ಬಂಧಿಸಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಆರೋಪಿ ಪರ ವಕೀಲ ಇಬ್ರಾಹಿಂ ಬಾತಿಷಾ ಯು.ಕೆ.ವಾದಿಸಿದ್ದರು.