![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಡಬ: ಇಲ್ಲಿನ ಹಳೆಸ್ಟೇಶನ್ ಬಳಿ ಕಡಬ-ಸುಬ್ರಹ್ಮಣ್ಯ ಮುಖ್ಯರಸ್ತೆಯಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಒಡೆದು ರಸ್ತೆಗೆ ಹಾನಿಯಾಗಿ ಸೃಷ್ಟಿಯಾಗಿದ್ದ ಅಪಾಯಕಾರಿ ಹೊಂಡವನ್ನು ತಿಂಗಳ ಹಿಂದೆ ಮುಚ್ಚಲಾಗಿತ್ತು. ಆದರೆ ಅದೇ ಜಾಗದಲ್ಲಿ ಮತ್ತೆ ಹೊಂಡ ಕಾಣಿಸಿಕೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಕಳೆದ ಹಲವು ವರ್ಷಗಳಿಂದ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದ ಈ ರಸ್ತೆ ಹೊಂಡವನ್ನು ಮುಚ್ಚಿ ಸಮಸ್ಯೆಯನ್ನು ಬಗೆಹರಿಸುವಂತೆ ಪದೇ ಪದೇ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ ಪರಿಣಾಮವಾಗಿ ಕಳೆದ ತಿಂಗಳು ಕಡಬ ಪಟ್ಟಣ ಪಂಚಾಯತ್ ಅಧಿಕಾರಿ ಜೆಸಿಬಿ ಮೂಲಕ ರಸ್ತೆಯಲ್ಲಿದ್ದ ಹೊಂಡವನ್ನು ಅಗೆಸಿ ಒಡೆದು ಹೋಗಿದ್ದ ನೀರಿನ ಪೈಪ್ ಅನ್ನು ದುರಸ್ತಿಪಡಿಸಲು ಕ್ರಮ ಕೈಗೊಂಡಿದ್ದರು.
ಬಳಿಕ ರಸ್ತೆಯನ್ನು ಅಗೆದಿರುವ ಜಾಗಕ್ಕೆ ಲೋಕೋಪಯೋಗಿ ಇಲಾಖಾಧಿಕಾರಿಗಳು ಡಾಮರು ಹಾಕಿಸಿ ಸರಿಪಡಿಸಿಕೊಟ್ಟಿದ್ದರು. ಆದರೆ ತಿಂಗಳು ಕಳೆಯುವ ಮೊದಲೇ ಹೊಂಡದ ಮಣ್ಣು ಜಗ್ಗಿ ಡಾಮರು ಎದ್ದು ಹೊಂಡ ಮರುಸೃಷ್ಟಿಯಾಗಿದೆ. ಮಾ. 21 ರಂದು ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ರಸ್ತೆಯ ಹೊಂಡಕ್ಕೆ ಸಿಲುಕಿ ನಿಯಂತ್ರಣ ತಪ್ಪಿ ಉರುಳಿಬಿದ್ದು ಗಾಯ ಗೊಂಡಿದ್ದಾರೆ. ಇನ್ನಷ್ಟು ಅಪಘಾತಗಳು ಸಂಭ ವಿಸುವ ಸಾಧ್ಯತೆಗಳಿರುವುದರಿಂದ ಸಂಬಂಧ ಪಟ್ಟ ವರು ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪುತ್ತೂರು ಲೋಕೋಪಯೋಗಿ ಇಲಾಖೆಯ ಎಇಇ ರಾಜ ರಾಮ್ ಅವರು ಸರಿ ಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.