ಬಹುಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ತೆಲುಗು ಸಿನಿಮಾದಲ್ಲಿ‌ ಬಣ್ಣ ಹಚ್ಚಿ ಗಮನ ಸೆಳೆಯುತ್ತಿರುವ ಪುತ್ತೂರಿನ ಪುಟಾಣಿ‌ ಆಜ್ಞಾ ರೈ

0

ಪುತ್ತೂರು: ಬಹುಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ತೆಲುಗು ಸಿನಿಮಾದಲ್ಲಿ ಪುತ್ತೂರಿನ ಪುಟಾಣಿ ಪ್ರತಿಭೆ ಆಜ್ಞಾ ರೈ ಬಣ್ಣ ಹಚ್ಚಿ ಗಮನ ಸೆಳೆಯುತ್ತಿದ್ದಾರೆ.
ಕ್ರೇಜಿ ಆಂಟ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ, ಖ್ಯಾತ ಕಲಾವಿದ ಶಂಕರ್ ನಿರ್ದೇಶಿಸುತ್ತಿರುವ, ರಾಕೇಶ್ ವೀರ್ ನಟನಾಗಿ ಮತ್ತು ಮಧುಮಿತಾ ನಾಯಕಿಯಾಗಿ ನಟಿಸುತ್ತಿರುವ ‘ಒಕ್ಕಟೆ ಆಶಾ’ ಎಂಬ ಸಿನಿಮಾದಲ್ಲಿ ಆಜ್ಞಾ ರೈ ಅಭಿನಯಿಸುತ್ತಿದ್ದಾರೆ. ನಾಯಕ ಮತ್ತು ನಾಯಕಿಯ ಮುದ್ದಿನ ಮಗಳಾಗಿ ಬಣ್ಣ ಹಚ್ಚಿರುವ ಆಜ್ಞಾ ರೈ ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ತನ್ನ ಮುದ್ದು‌ ಮದ್ದಾದ ನಟನೆಯ ಮೂಲಕ ಶೂಟಿಂಗ್ ಸೆಟ್ ನಲ್ಲಿ ಆಕರ್ಷಿಸುತ್ತಿದ್ದಾರೆ. ಕಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾದ ಚಿತ್ರೀಕರಣ ವಿವಿಧ ಪ್ರಮುಖ ಸ್ಥಳಗಳಲ್ಲಿ ಭರದಿಂದ ನಡೆಯುತ್ತಿದ್ದು ಆಜ್ಞಾ ರೈ ಅಭಿನಯಿಸಿ ಚಿತ್ರ ತಂಡದಿಂದ ಭೇಷ್ ಎನಿಸಿಕೊಂಡಿದ್ದಾರೆ.‌

ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಒಂದನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಉದ್ಯಮಿಯಾಗಿರುವ ಕುರಿಯದ ಜಯರಾಮ್ ರೈ ಮತ್ತು ಪತ್ರಕರ್ತೆಯಾಗಿರುವ ತಾಯಿ ಹೇಮಾ ಜಯರಾಮ್ ರೈಯವರ ಪುತ್ರಿಯಾಗಿರುವ ಈಕೆ ಯೋಗ, ಸಂಗೀತ, ಭರತನಾಟ್ಯ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕೂಡ್ಲಿಗಿಯ ಗುರುದೇವ ಗುರುಕುಲದ ಶಶಿಧರ್ ಗುರೂಜಿಯವರಿಂದ ಭಗವದ್ಗೀತಾ ಪಠಣ, ನಿತ್ಯ ಶ್ಲೋಕಗಳು, ವಿವೇಕ ಮೆಮೊರಿ, ಗಾಂಧಾರಿ ವಿದ್ಯೆಯಂತಹ ಧಾರ್ಮಿಕ ಶಿಕ್ಷಣವನ್ನು ಪಡೆದಿರುವ ಕುಮಾರಿ ಆಜ್ಞಾ ರೈಯವರು ಆರ್ಯಭಟ ಪ್ರಶಸ್ತಿ ಪುರಸ್ಕೃತರೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ‌ ಪುರಸ್ಕೃತರೂ ಆಗಿರುವ ಜಗದೀಶ್ ಪುತ್ತೂರು ಅವರ ಹರಿಕುಣಿದ ಭಕ್ತಿ ಗಾಯನ, ಕರುನಾಡ ಗಾನ ಗಂಧರ್ವ ಬಿರುದಾಂಕಿತ ಮಿಥುನ್ ರಾಜ್ ವಿದ್ಯಾಪುರ ಇವರ ನವಶಕ್ತಿ ವೈಭವ, ವರ್ಣ ಕಲಾರತ್ನ ಬಿರುದಾಂಕಿತ ಪ್ರೇಮ್ ರಾಜ್ ಆರ್ಲಪದವು ನಿರ್ದೇಶನದ ದೇಶಭಕ್ತಿಯನ್ನು ಸಾರುವ ಆಲ್ಬಂ ಸಾಂಗ್ ಗಳಲ್ಲಿ ಅಭಿನಯಿಸಿದ್ದಾರೆ. ‘ಗೇನದಾಂತಿ ಉಡಲ್’ ಎನ್ನುವ ತುಳು ಕಿರುಚಿತ್ರದಲ್ಲೂ ಈ ಪೋರಿ ನಟಿಸಿದ್ದಾರೆ. ಆಜ್ಞಾ ರೈಯವರ ಅಕ್ಕ, ಸಾಂದೀಪನಿ ವಿದ್ಯಾಸಂಸ್ಥೆಯ ಹನ್ನೊಂದರ ಹರೆಯದ ವಿದ್ಯಾರ್ಥಿನಿ, ತನ್ನ ಬಹುಮುಖ ಪ್ರತಿಭೆಯ ಮೂಲಕ ಗುರುತಿಸಿಕೊಂಡು ಹಲವು ಪ್ರಶಸ್ತಿ ಪುರಸ್ಕೃತರಾಗಿರುವ ಜ್ಞಾನ ರೈಯವರೂ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

LEAVE A REPLY

Please enter your comment!
Please enter your name here