ಪುತ್ತೂರು: ಎ.10ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡ ಇತಿಹಾಸ ಪ್ರಸಿದ್ಧ ಪುತ್ತೂರಿನ ಸೀಮಾಧಿಪತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಎ.19ರಂದು ಧ್ವಜಾವರೋಹಣದೊಂದಿಗೆ ಸಂಪನ್ನಗೊಂಡಿತ್ತು.
ಎ.10ರಂದು ಧ್ವಜಾರೋಹಣದೊಂದಿಗೆ ಜಾತ್ರೋತ್ಸವ ಆರಂಭಗೊಂಡಿದ್ದು, ಎ.17ರಂದು ಬ್ರಹ್ಮರಥೋತ್ಸವ ನಡೆಯಿತು. ಎ.18ರಂದು ಸಂಜೆ ಕಾಲ್ನಡಿಗೆಯಲ್ಲಿ ಅವಭೃತ ಸ್ನಾನಕ್ಕೆ ವೀರಮಂಗಲಕ್ಕೆ ತೆರಳಿದ ಶ್ರೀ ದೇವರು ದಾರಿಯುದ್ಧಕ್ಕೂ 56 ಕಟ್ಟೆ ಪೂಜೆ ಮತ್ತು ಅಂಗಡಿ, ಮನೆಗಳಿಂದ ಆರತಿ ಸ್ವೀಕರಿಸಿ ಎ.19ರಂದು ಬೆಳಿಗ್ಗೆ 5ಗಂಟೆಗೆ ವೀರಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ತಲುಪಿ ಬಳಿಕ ಕುಮಾರಧಾರ ಹೊಳೆಯ ತಟದಲ್ಲಿರುವ ಕಟ್ಟೆಯಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ 6.55ಕ್ಕೆ ಕುಮಾರಧಾರ ನದಿಯಲ್ಲಿ ಅವಭೃತ ಸ್ನಾನಕ್ಕೆ ಇಳಿದರು. ಅಲ್ಲಿ ಸ್ನಾನ ಮುಗಿಸಿ ಗಂಟೆ 7ಕ್ಕೆ ಹೊರಟು ನದಿ ತಟದಲ್ಲಿರುವ ಕಟ್ಟೆಯಲ್ಲಿ ನೈವೇದ್ಯ, ಮಹಾಪೂಜೆ ಸ್ವೀಕರಿಸಿ ಓಡೋಡಿ ಬಂದು ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಬೆಳಿಗ್ಗೆ ಗಂಟೆ 10.05 ಕ್ಕೆ ಆಗಮಿಸಿದರು. 10.15 ಕ್ಕೆ ದೇವಳದಲ್ಲಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಧ್ವಜಾವರೋಹಣ ಕಾರ್ಯಕ್ರಮ ನಡೆಯಿತು. ಆ ಮೂಲಕ 10 ದಿನಗಳ ಕಾಲ ನಡೆದ ಪುತ್ತೂರು ಜಾತ್ರೆ ಸಂಪನ್ನಗೊಂಡಿತು.