ನೆಲ್ಯಾಡಿ: ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಪ್ರಸ್ತುತ ಪಡಿಸುವ 68ನೇ ವರ್ಷ ಕಲಾಸೇವೆಯ ‘ಕಾಂಚನೋತ್ಸವ 2022’, 68ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ, ಸ್ಥಾಪಕ ಗುರುಗಳಾದ ಸಂಗೀತರತ್ನ ಕಾಂಚನ ವೆಂಕಟಸುಬ್ರಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂರವರ ಪುಣ್ಯ ದಿನಾಚರಣೆ ಎ.23ರಂದು ಬಜತ್ತೂರು ಗ್ರಾಮದ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆಯಲ್ಲಿ ನಡೆಯಿತು.
ಬೆಳಿಗ್ಗೆ ವೇ.ಬ್ರ.ನಾರಾಯಣ ಬಡಕಿಲ್ಲಾಯರವರ ನೇತೃತ್ವದಲ್ಲಿ ಗಣಹೋಮ ನಡೆಯಿತು. ‘ಊಂಛ ವೃತ್ತಿ’ ಸಂತ ಶ್ರೀ ತ್ಯಾಗರಾಜರ ಉತ್ಸವ ಸಂಪ್ರದಾಯ ಮತ್ತು ದಿವ್ಯನಾಮ ಸಂಕೀರ್ತನೆಗಳ ವಾದ್ಯ-ಗಾಯನ-ಭಜನೆಗಳೊಂದಿಗೆ ಸಂಗೀತ ನಡಿಗೆ ಕಾಂಚನ ಮನೆಯಿಂದ ಸಂಗೀತ ಶಾಲೆಯವರೆಗೆ ನಡೆಯಿತು. ಶ್ರೀ ಪುರಂದರದಾಸರ ಪಿಳ್ಳಾರಿ ಗೀತೆಗಳು ಮತ್ತು ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿಗಾನ, ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
ಸಂಗೀತ ಕಾರ್ಯಕ್ರಮ:
ಮಧ್ಯಾಹ್ನ ಕರ್ನಾಟಕ ಕಲಾಶ್ರೀ ದಿ.ಕಾಂಚನ ವಿ.ಸುಬ್ಬರತ್ನಂರವರ ಶಿಷ್ಯರಾದ ವಿದ್ವಾನ್ ದಿ.ಯು.ಎಸ್.ರಾಮಕೃಷ್ಣ ಭಟ್ಟರ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ನಡೆಯಿತು. ಗಾಯನದಲ್ಲಿ ಅಭಿಷೇಕ್ ಎನ್.ಎಸ್., ಪಿಟೀಲುನಲ್ಲಿ ಕುಮಾರಿ ಋತ ಕೆ.ಜೆ., ದ್ವಂದ್ವ ಮೃದಂಗದಲ್ಲಿ ಶಿವಕುಮಾರ್ ಕಲ್ಕೂರ್ ಮತ್ತು ಶ್ರೇಯಸ್ ರಂಗನಾಥ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಸಂಗೀತ ಕಛೇರಿ:
ಸಂಜೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಿದ್ವಾನ್ ಕುನ್ನಕುಡಿ ಬಾಲಮುರಳಿ ಕೃಷ್ಣ, ವಿದುಷಿ ಅಕ್ಕರೈ ಸ್ವರ್ಣಲತಾ, ಮೃದಂಗದಲ್ಲಿ ವಿದ್ವಾನ್ ಅರ್ಜುನ್ ಕುಮಾರ್ರವರು ಸಂಗೀತ ಕಛೇರಿ ನಡೆಸಿಕೊಟ್ಟರು. ರಾತ್ರಿ ಶ್ರೀ ಸತ್ಯನಾರಾಯಣ ಪೂಜೆ, ದುರ್ಗಾನಮಸ್ಕಾರ ಪೂಜೆ, ಪ್ರಸಾದ ವಿತರಣೆ, ಮಹಾಪೂಜೆ, ಮಂತ್ರಾಕ್ಷತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಮಧ್ಯಾಹ್ನ ಮತ್ತು ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ದಿನಪೂರ್ತಿ ನಡೆದ ಸಂಗೀತ ಕಾರ್ಯಕ್ರಮ ಸಂಗೀತ ಪ್ರಿಯರ ಮನಸೂರೆಗೊಂಡಿತು.