![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಾಣಿಯೂರು: ಸಮಾಜ ಅಭಿವೃದ್ಧಿಯ ಪಥದತ್ತ ಹೆಜ್ಜೆಯಿಡಬೇಕಾದರೆ ಸಂಘಟನೆಗಳ ಪಾತ್ರವು ಮುಖ್ಯವಾಗಿರುತ್ತದೆ. ಯುವಜನತೆ ಸೇವಾಮನೋಭಾವವನ್ನು ಮೈಗೂಡಿಸಿಕೊಂಡು ಮುಂದುವರಿದಾಗ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ. ಪರಸ್ಪರ ಅನ್ಯೋನ್ಯತೆಯಿಂದ, ಸ್ನೇಹಮಯಿಯಾಗಿ ಸಮಾಜಮುಖಿ ಚಿಂತನೆಯ ಮೂಲಕ ಉತ್ತಮ ಗುಣಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಅರುವಗುತ್ತಿನ ಯಜಮಾನ ಪ್ರದೀಪ್ ಆರ್ ಗೌಡ ಮೈಸೂರು ಹೇಳಿದರು.
ಅವರು ಚಾರ್ವಾಕ ಗ್ರಾಮದ ನಾಲ್ಕಂಭ ಶ್ರೀ ಷಣ್ಮುಖ ಸ್ಪೋರ್ಟ್ಸ್ ಕ್ಲಬ್ ಇದರ ವತಿಯಿಂದ ಎ. 24ರಂದು ನಾಲ್ಕಂಭ ಶಕ್ತಿಸಾಗರ ವೇದಿಕೆಯಲ್ಲಿ ನಡೆದ ಸಿ.ಪಿ ಜಯರಾಮ ಗೌಡ ಸ್ಮರಣಾರ್ಥ ವಿಶ್ವಾಸ್ ಟ್ರೋಫಿ ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯರ ಮಾರ್ಗದರ್ಶನದಲ್ಲಿ ಯುವಕರ ಶಕ್ತಿಯ ಜೊತೆಗೆ ಶ್ರೀ ಷಣ್ಮುಖ ಸ್ಪೋರ್ಟ್ಸ್ ಕ್ಲಬ್ನ ಮೂಲಕ ಗ್ರಾಮದ ಅಭಿವೃದ್ಧಿ ಪ್ರಾರಂಭವಾಗಲಿ ಎಂದರು. ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ ಮಾತನಾಡಿ, ಅಗಲಿದವರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಸಿ.ಪಿ ಜಯರಾಮ ಗೌಡರವರು ನೀಡಿರುವ ಸೇವೆಯನ್ನು ಇಂತಹ ಕಾರ್ಯಕ್ರಮದ ಮೂಲಕ ಸ್ಮರಣೆ ಮಾಡಿಕೊಳ್ಳುತ್ತಿರುವುದು ಉತ್ತಮ ವಿಚಾರ ಎಂದರು. ಸುಬ್ರಹ್ಮಣ್ಯ ಶ್ರೀ ಕುಕ್ಕೇಶ್ರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, ಹುಟ್ಟು ಸಾವಿನ ಮಧ್ಯೆ ಒಳ್ಳೆಯ ಕೆಲಸಗಳನ್ನು ಮಾಡಿದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ ಎನ್ನುವುದಕ್ಕೆ ಸಿ.ಪಿ ಜಯರಾಮ ಗೌಡರು ಮಾಡಿರುವ ಉತ್ತಮ ಅಭಿವೃದ್ಧಿ ಕೆಲಸವೇ ಸಾಕ್ಷಿಯಾಗಿದೆ. ಚಾರ್ವಾಕ ಭಾಗವನ್ನು ಅಭಿವೃದ್ಧಿ ಮಾಡುವ ಮೂಲಕ ಎಲ್ಲರ ಮನಗೆದ್ದ ಸಿ.ಪಿ ಜಯರಾಮ ಗೌಡ ಅವರನ್ನು ಇಂತಹ ಕ್ರೀಡಾಕೂಟ ಕಾರ್ಯಕ್ರಮದ ಮುಖಾಂತರ ನೆನಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಬಹುಮಾನ ವಿತರಿಸಿ ಮಾತನಾಡಿದ ವಚನ ಪ್ರದೀಪ್ ಅರುವಗುತ್ತು ಮಾತನಾಡಿ, ಕ್ರೀಡಾಕೂಟದ ಮುಖಾಂತರ ಪ್ರತಿ ವರ್ಷ ಸ್ಮರಣೆ ಮಾಡುತ್ತಿರುವ ಷಣ್ಮುಖ ಸ್ಪೋರ್ಟ್ಸ್ ಕ್ಲಬ್ಗೆ ಕೃತಜ್ಞತೆ ಸಲ್ಲಿಸಿದರು. ಸಿ.ಜೆ. ಚಂದ್ರಕಲಾ ಜಯರಾಮ್ ಅರುವಗುತ್ತು, ಕಾಣಿಯೂರು ಗ್ರಾ.ಪಂ. ಸದಸ್ಯೆ ಕೀರ್ತಿಕುಮಾರಿ ಅಂಬುಲ, ಮಂಗಳೂರು ಸಿಂಡಿಕೇಟ್ ವಿಶ್ವವಿದ್ಯಾನಿಲಯದ ಮಾಜಿ ಸದಸ್ಯ ವಿಜಯಕುಮಾರ್ ಸೊರಕೆ, ಚಾರ್ವಾಕ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಪಂಗಡದ ಸಂಚಾಲಕ ಸುಂದರ ದೇವಸ್ಯ, ಮನೋಹರ್ ಕಟ್ಟತ್ತಾರು ಉಪಸ್ಥಿತರಿದ್ದರು. ನಾಲ್ಕಂಭ ಶ್ರೀ ಷಣ್ಮುಖ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ದಿಶಾಂತ್ ಎನ್.ಎಸ್, ಉಪಾಧ್ಯಕ್ಷ ಗೌತಮ್ ಮಾಚಿಲ, ಕಾರ್ಯದರ್ಶಿ ಟಿನಿತ್ ಕುಂಬ್ಲಾಡಿ, ಕ್ರೀಡಾ ಕಾರ್ಯದರ್ಶಿ ಗೌರೀಶ್ ಕುಂಬ್ಲಾಡಿ, ಜತೆ ಕಾರ್ಯದರ್ಶಿ ಗಣೇಶ್ ಓಡದಕರೆ, ಕೋಶಾಧಿಕಾರಿ ಕಾರ್ತಿಕ್ ಉದಲಡ್ಡ ಉಪಸ್ಥಿತರಿದ್ದರು. ಕ್ಲಬ್ನ ಗೌರವಸಲಹೆಗಾರರಾದ ಧರ್ಣಪ್ಪ ಗೌಡ ಅಂಬುಲ ಸ್ವಾಗತಿಸಿ, ಮಾಜಿ ಅಧ್ಯಕ್ಷರಾದ ಪ್ರಶಾಂತ್ ಅಂಬುಲ ಮತ್ತು ವಿಜಿತ್ ಮಾಚಿಲ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಸಮಾರಂಭ: ಬೆಳಿಗ್ಗೆ ಕಾರ್ಯಕ್ರಮವನ್ನು ಸಿ.ಜೆ. ಚಂದ್ರಕಲಾ ಜಯರಾಮ್ ಅರುವಗುತ್ತು ಉದ್ಘಾಟಿಸಿದರು. ನಾಲ್ಕಂಭ ಶ್ರೀ ಷಣ್ಮುಖ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ದಿಶಾಂತ್ ಎನ್.ಎಸ್. ನಡುಬೈಲು ಅಧ್ಯಕ್ಷತೆಯನ್ನು ವಹಿಸಿದ್ದರು. ಕ್ರೀಡಾಕೂಟವನ್ನು ಪ್ರಕಾಶ್ ಗೌಡ ಅರುವ ಉದ್ಘಾಟಿಸಿದರು. ಚಾರ್ವಾಕ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಗಣಪತಿ ಭಟ್, ಗ್ರಾ.ಪಂ. ಸದಸ್ಯೆ ಗಂಗಮ್ಮ ಗುಜ್ಜರ್ಮೆ ಉಪಸ್ಥಿತರಿದ್ದರು.
ವಿಜೇತರ ವಿವರ: ನಾಲ್ಕಂಭ ಶ್ರೀ ಷಣ್ಮುಖ ಸ್ಪೋರ್ಟ್ಸ್ ಕ್ಲಬ್ನ ವತಿಯಿಂದ ಸಿ.ಪಿ ಜಯರಾಮ ಗೌಡರವರ ಸ್ಮರಣಾರ್ಥ ವಿಶ್ವಾಸ್ ಟ್ರೋಫಿಯಲ್ಲಿ ದಕ್ಷಿಣ ಕಾಶಿ ಉಪ್ಪಿನಂಗಡಿ ಪ್ರಥಮ ಸ್ಥಾನ ಪಡೆದುಕೊಂಡು, ಚಕ್ರವರ್ತಿ ಎಣ್ಮೂರು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಉಳ್ಳಾಲ್ತಿ ಎ ತಂಡ ತೃತೀಯ ಸ್ಥಾನ ಪಡೆದುಕೊಂಡು, ನಾಣಿಲ ಫ್ರೇಂಡ್ಸ್ ಚತುರ್ಥ ಸ್ಥಾನ ಪಡೆದಕೊಂಡಿತು.
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಗೊಂಡಿರುವ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು ಮತ್ತು ದೈಪಿಲ ಶ್ರೀ ರಾಜನ್ ದೈವದ ಮುಖ್ಯ ಪರಿಚಾರಕರಾಗಿ ಸೇವೆ ಮಾಡಿಕೊಂಡು ಬರುತ್ತಿದ್ದ ದುಗ್ಗಣ್ಣ ಗೌಡ ಅಂಬುಲವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.