ಪುತ್ತೂರು: ಪುತ್ತೂರಿನ ಬಾಲವನ್ನು ಕರ್ಮಭೂಮಿಯಾಗಿಸಿಕೊಂಡ ಡಾ| ಶಿವರಾಮರಾಮ ಕಾರಂತರ ಧ್ವನಿ ಮತ್ತು ಚಿತ್ರವನ್ನೊಳಗೊಂಡ ಸ್ಟುಡಿಯೋ ಬಾಲವನದಲ್ಲಿ ನಿರ್ಮಾಣ ಆಗಬೇಕು. ಈ ನಿಟ್ಟಿನಲ್ಲಿ ಆಸಕ್ತರನ್ನು ಸೇರಿಸಿಕೊಂಡು ಸಭೆ ನಡೆಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ರಾಜ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಖಾತೆಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಅವರು ಹೇಳಿದ್ದಾರೆ.
ಮೇ ೧೭ರಂದು ಬೆಳಿಗ್ಗೆ ಅವರು ಪುತ್ತೂರು ಬಾಲವನಕ್ಕೆ ಭೇಟಿ ನೀಡಿ ಆರ್ಟ್ಗ್ಯಾಲರಿಯಲ್ಲಿ ಬಾಲವನ ಅಭಿವೃದ್ಧಿ ಸಮಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಮಾನ ಮನಸ್ಕರ ಜೊತೆಯಲ್ಲಿ ಮತ್ತು ಅಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಿ, ಡಾ| ಶಿವರಾಮ ಕಾರಂತರ ಮನೆ, ನಾಟ್ಯಶಾಲೆ, ಪ್ರಿಂಟಿಂಗ್ ಪ್ರೆಸ್ ಕಟ್ಟಡ, ಅಧ್ಯಯನ ಕೇಂದ್ರವನ್ನು ವೀಕ್ಷಣೆ ಮಾಡಿದ ಬಳಿಕ ಬಳಿಕ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದರು. ಡಾ| ಶಿವರಾಮ ಕಾರಂತರ ಕಾರಣಕ್ಕೆ ಸಾಹಿತ್ಯ ಇಷ್ಟು ದೊಡ್ಡದಾಗಿ, ಶ್ರೀಮಂತವಾಗಿ ಬೆಳೆದಿದೆ. ಅವರ ಪ್ರೇರಣೆ ಇನ್ನಷ್ಟು ಯುವಕರಿಗೆ ಸಿಗಬೇಕು. ಅವರ ಮನೆ, ನಾಟ್ಯ ಶಾಲೆ, ಬರಹದ ಕೊಠಡಿ ಉಳಿಸಿಕೊಂಡು ಆ ಕೇಂದ್ರದ ಮೂಲಕ ಇನ್ನಷ್ಟು ಯುವ ಕಲಾವಿದರನ್ನು ಸಿದ್ದಪಡಿಸಬೇಕು. ಈ ನಡುವೆ ಬಾಲವನದ ಒಟ್ಟು ಚಟುವಟಿಕೆ ಮುನ್ನಡೆಸಲು ಕ್ರೀಯಾಶೀಲವಾದ ಸಮಿತಿ ರಚನೆ ಮಾಡಬೇಕು. ಆಸಕ್ತಿಯುಳ್ಳವರು ಈ ಸಮಿತಿಯಲ್ಲಿದ್ದು, ರಾಜ್ಯಮಟ್ಟದ ಸಮಿತಿಯಲ್ಲೂ ಸ್ಥಳೀಯರನ್ನು ಸೇರಿಸಬೇಕೆಂದರು. ಮುಂದಿನ ೫ ವರ್ಷದ ಯೋಜನೆ ಜೊತೆಗೆ ಈ ಹಿಂದೆ ಬಾಲವನಕ್ಕೆ ಕೊಟ್ಟ ಅನುದಾನವೇ ಇನ್ನೂ ಬಳಕೆಯಾಗಿಲ್ಲ. ಇರುವಂತಹ ಅನುದಾನವನ್ನು ಬಳಸಿಕೊಂಡು ಹೊಸ ಚಟುವಟಿಕೆ ಮಾಡಲು ಕಟ್ಟಡಗಳ ರಚನೆಗಿಂತಲೂ ಇಲ್ಲಿರುವ ಮೂಲ ಚಟುವಟಿಕೆ ಮಾಡಲು ಏನು ಅನುದಾನ ಬೇಕೋ ಅದನ್ನು ಬಿಡುಗಡೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಸದಸ್ಯೆ ದೀಕ್ಷಾ ಪೈ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕುಮಾರ್, ಜಿ.ಪಂ ಸಿಇಒ ಕುಮಾರ್, ಸಹಾಯಕ ಕಮೀಷನರ್ ಗಿರೀಶ್ನಂದನ್, ತಹಸೀಲ್ದಾರ್ ರಮೇಶ್ ಬಾಬು, ಹಿರಿಯ ಸಾಹಿತಿ ಪ್ರೊ. ವಿ.ವಿ.ಅರ್ತಿಕಜೆ, ಬೆಟ್ಟಂಪಾಡಿ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ, ರಂಗಕಲಾ ನಿರ್ದೇಶಕ ಜೀವನ್ರಾಮ್ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು.