ಉಪ್ಪಿನಂಗಡಿ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆಗೊಂಡಿತು.
ತರಬೇತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಯಕ್ಷ ನಂದನ ಕಲಾಸಂಘದ ಸಂಚಾಲಕ ಭಾಸ್ಕರ್ ಬಟ್ಟೋಡಿ, ಯಕ್ಷಗಾನ ಕಲೆಯು ಪಾವಿತ್ರತೆಯಿಂದ ಕೂಡಿದೆ. ಪೌರಾಣಿಕ ಕಥಾ ಪ್ರಸಂಗಗಳನ್ನು ಒಳಗೊಂಡಿರುವ ಅದ್ಭುತ ಶಾಸ್ತ್ರೀಯ ಕಲೆ ಇದಾಗಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಕೌಶಲವನ್ನು ತುಂಬುವ ಕಲೆಯಾಗಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಯಕ್ಷ ನಂದನ ಕಲಾ ಸಂಘದ ಅಧ್ಯಕ್ಷ ಗಣರಾಜ ಕುಂಬ್ಳೆ ಮಾತನಾಡಿ, ವಿದ್ಯಾರ್ಥಿಗಳು ಈ ಕಲೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ತರಬೇತಿದಾರೆ ಶ್ರುತಿ ವಿಸ್ಮಿತ ಮಾತನಾಡಿ, ಶಿಕ್ಷಣದ ಜೊತೆಗೆ ಯಕ್ಷಗಾನ ನಾಟ್ಯಕಲೆ ಕಲಿತಾಗ ಸಮಾಜದಲ್ಲಿ ಗುರುತಿಸುವ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಪರಿವೀಕ್ಷಕ ಬಾಲಕೃಷ್ಣ ಗೌಡ ಮಾತನಾಡಿ, ಯಕ್ಷಗಾನ ಎಂಬುದು ಹಾಡುಗಾರಿಕೆ, ಬಣ್ಣ ಹಚ್ಚುವ ಹಾಗೂ ಮಾತಿನ ಕೌಶಲವನ್ನು ಹೆಚ್ಚಿಸುವ ಕಲೆ. ಪೋಷಕರು ಸ್ಪಂದಿಸಿ ಮಕ್ಕಳಿಗೆ ಅವಕಾಶ ಕೊಡಬೇಕು ಎಂದು ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷ ಬಾಬು ಗೌಡ, ಸದಸ್ಯರಾದ ಮಧುರ ಉಪಸ್ಥಿತರಿದ್ದರು. ಲಕ್ಷ್ಮಿ ಪಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕರಾದ ಸವಿತಾ ವಂದಿಸಿ, ಶಕುಂತಲಾ ಕೆ. ಕಾರ್ಯಕ್ರಮ ನಿರೂಪಿಸಿದರು.