ಮಡಂತ್ಯಾರು: ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು ದ.ಕ ಹಾಗೂ ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜು ಮಡಂತ್ಯಾರು ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಬಾಲಕ- ಬಾಲಕಿಯರ ತ್ರೋಬಾಲ್ ಪಂದ್ಯಾಟ ಸೆ.10 ರಂದು ಜರಗಿತು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಲಿಯೋ ರೊಡ್ರಿಗಸ್ ಪಂದ್ಯಾಟವನ್ನು ಉದ್ಘಾಟಿಸಿ, ಶಿಕ್ಷಣ ಮತ್ತು ಕ್ರೀಡೆಗೆ ವ್ಯತ್ಯಾಸವಿದೆ. ಶಿಕ್ಷಣದಲ್ಲಿ ಶೇಕಡವಾರು ಅಂಕಗಳು ದೊರೆತರೆ ಸಾಕು ಆದರೆ ಕ್ರೀಡೆಯಲ್ಲಿ ತಂಡದ ಸಮಾನ ಮನಸ್ಕತೆ ಮುಖ್ಯ. ಕ್ರೀಡೆಯಲ್ಲಿ ಓರ್ವ ಗೆಲ್ಲ ಬೇಕಾದರೆ ಓರ್ವ ಸೋಲಲೇ ಬೇಕು. ಸೋಲನ್ನು ಧನಾತ್ಮಕವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳ ಬೇಕು ಎಂದು ಅವರು ಹೇಳಿದರು.
ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಸಂಚಾಲಕರಾದ ವಂ| ಬೇಸಿಲ್ ವಾಸ್ ಅಧ್ಯಕ್ಷತೆ ವಹಿಸಿದ್ದರು.
ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮ್ಯಾಕ್ಸಿಮ್ ಅಲ್ಬುಕರ್ಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಕಾಲೇಜಿನ ಪ್ರಾಂಶುಪಾಲರಾದ ವಂ|ಜೆರೋಮ್ ಡಿಸೋಜ ಸ್ವಾಗತಿಸಿ, ಉಪನ್ಯಾಸಕರಾದ ಪ್ರಿಯಾ ಜ್ಯೋತಿ ಕುಟಿನ್ಹಾ ವಂದಿಸಿ, ವಸಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ:
ತಾಲೂಕಿನ ಬಾಲಕ – ಬಾಲಕಿಯರ ಒಟ್ಟು ಇಪ್ಪತ್ತು ತಂಡಗಳು ಪಂದ್ಯಾಟದಲ್ಲಿ ಭಾಗ ವಹಿಸಿದ್ದವು. ಬಾಲಕರ ವಿಭಾಗದಲ್ಲಿ ವಾಣಿ ಪ.ಪೂ ಕಾಲೇಜು ಪ್ರಥಮ ಸ್ಥಾನ ಹಾಗೂ ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.
ಬಾಲಕಿಯರ ವಿಭಾಗದಲ್ಲಿ ಸಂತ ಅಂತೋನಿ ಪ.ಪೂ ಕಾಲೇಜು ಪ್ರಥಮ ಹಾಗೂ ಸರಕಾರಿ ಪ.ಪೂ ಕಾಲೇಜು ಅಳದಂಗಡಿ ದ್ವಿತೀಯ ಸ್ಥಾನ ಪಡೆಯಿತು. ಸಮಾರೋಪ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ|ಜೆರೋಮ್ ಡಿಸೋಜ ಬಹುಮಾನ ವಿತರಿಸಿದರು.ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡೆನ್ನಿಸ್ ಫೆರ್ನಾಂಡಿಸ್ ಹಾಗೂ ಸಂಜಿತ್ ಕುಮಾರ್ ಶೆಟ್ಟಿ ಪಂದ್ಯಾಟ ಯಶಸ್ಸಿಗೆ ಸಹಕರಿಸಿದರು.