ವಿಟ್ಲ: ವಿಟ್ಲ ಮುಡ್ನೂರು ಗ್ರಾಮದ ಕಾಂತಮೂಲೆ ಎಂಬಲ್ಲಿ ತಂದೆಯೇ ಮಗನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂದಿಸಿದಂತೆ ಘಟನಾ ಸ್ಥಳಕ್ಕೆ ಫೆ.24ರಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನಾವಣೆಯವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಟ್ಲ ಮುಡ್ನೂರು ಗ್ರಾಮದ ಕಾಂತಮೂಲೆ ಎಂಬಲ್ಲಿ ಒಂದು ಮನೆಯಲ್ಲಿ ಕೊಲೆನಡೆದಿರುವ ಬಗ್ಗೆ ರಾತ್ರಿ ವೇಳೆ ಪೊಲೀಸ್ ಠಾಣೆಗೆ ಮಾಹಿತಿ ಲಭಿಸುತ್ತದೆ. ಸ್ಥಳಕ್ಕೆ ತೆರಳಿ ನೋಡಿದಾಗ 40 ವರ್ಷ ವಯಸ್ಸಿನ ದಿನೇಶ್ ಗೌಡ ಎಂಬವರನ್ನು ಅವರ ತಂದೆ ವಸಂತ ಗೌಡರವರು ಕೊಲೆ ಮಾಡಿರುವುದಾಗಿ ಮೇಲ್ನೋಟ್ಟಕ್ಕೆ ಕಂಡುಬಂದಿರುತ್ತದೆ. ಒಟ್ಟು ಘಟನೆಗೆ ಸಂಬಂದಿಸಿದಂತೆ ಅವರ ದೊಡ್ಡ ಮಗ ಎಂ.ವಿ. ಮುರಳಿರವರು ನೀಡಿದ ಕಂಪ್ಲೈಟ್ ಪ್ರಕಾರ ಠಾಣೆಯಲ್ಲಿ ೩೦೨ ಕಾಯ್ದೆಯ ಅಡಿಯಲ್ಲಿ ಮರ್ಡರ್ ಕೇಸು ದಾಖಲು ಮಾಡಿರುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಸಂತ ಗೌಡರವರನ್ನು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದೇವೆ. ಯಾವ ಕಾರಣಕ್ಕಾಗಿ ಕೊಲೆ ನಡೆದಿದೆ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ. ಸದ್ಯಕ್ಕೆ ಆ ಕೊಲೆಯನ್ನು ಆತನ ತಂದೆಯೇ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ತನಿಖೆ ಪ್ರಗತಿಯಲ್ಲಿದೆ ಎಂದರು.
ಘಟನೆ ಫೆ.23ರಂದು ರಾತ್ರಿ ವೇಳೆ ಬೆಳಕಿಗೆ ಬಂದಿತ್ತು. ಘಟನೆಯ ಬಗ್ಗೆ ಮಾಹಿತಿ ಅರಿತ ಸ್ಥಳೀಯರು ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು ಅದರಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದರು. ದಿನೇಶ್ ಹಾಗೂ ವಸಂತ ಗೌಡರ ಮಧ್ಯೆ ಕುಡಿತದ ಮತ್ತಿನಲ್ಕಿ ಆಗಾಗ ಗಲಾಟೆ ನಡೆಯುತ್ತಿದ್ದು, ನಿನ್ನೆ ಕೂಡ ಅದೇ ರೀತಿ ಗಲಾಟೆ ನಡೆದು ಮಗನ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿದುಬಂದಿದೆ. ದಿನೇಶ್ ರವರ ಮೃತದೇಹ ಮನೆಯ ಕೊಣೆಯ ಒಳಗೆ ಮಂಚದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಸಂತ ಗೌಡರವರಿಗೆ ಇಬ್ಬರು ಗಂಡುಮಕ್ಕಳಿದ್ದು ಹಿರಿಯ ಮಗ ಆತನ ಪತ್ನಿ ಮಗುವಿನೊಂದಿಗೆ ಮನೆಯಿಂದ ಅಲ್ಪ ದೂರದಲ್ಲಿ ಪ್ರತ್ಯೇಕ ಮನೆ ಮಾಡಿ ವಾಸಿಸುತ್ತದ್ದಾರೆ. ಕಿರಿಯ ಮಗ ದಿನೇಶ ಹಾಗೂ ವಸಂತ ಗೌಡ ಜೊತೆಯಾಗಿಯೇ ವಾಸಿಸುತ್ತಿದ್ದರು. ದಿನೇಶ ವಿವಾಹಿತ ನಾಗಿದ್ದು ಆತನ ಪತ್ನಿ ಕೆಲವರುಷಗಳ ಹಿಂದೆ ಆತನನ್ನು ತೊರೆದು ಹೋಗಿದ್ದರು ಎಂದು ತಿಳಿದುಬಂದಿದೆ