ಪುತ್ತೂರು: ಪರಿಶ್ರಮಿ, ಕುಶಲಕರ್ಮಿ ದುಡಿಯುವ ಕೈಗಳಿಂದ ದೇಶ ಪುನರುತ್ಥಾನ ಆಗುತ್ತದೆ. ನಮ್ಮ ದೇಶದ 137 ಕೋಟಿ ಜನಸಂಖ್ಯೆಯಲ್ಲಿ ಸಿಂಹಪಾಲು ಕಾರ್ಮಿಕರದ್ದಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಭಾರತ ಕಟ್ಟಡ ಕಾರ್ಮಿಕರ ಸಂಘದ 4ನೇ ವರ್ಷದ ಮಹಾಸಭೆಯನ್ನು ಮೇ.16ರಂದು ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಕಾಯಕವೇ ಕೈಲಾಸ ಎಂದು ಭಾವಿಸಿ ಕಾರ್ಮಿಕರು ದುಡಿಯುತ್ತಾರೆ. ದುಡಿಯುವ ಕೈಗಳ ಶ್ರಮದಿಂದಲೇ ಈ ದೇಶ ನಿರ್ಮಾಣಗೊಂಡಿವೆ. ನಮ್ಮ ಸಂಸ್ಕೃತಿ, ನಾಗರಿಕತೆ, ಕಲೆ ಎಲ್ಲವೂ ರೂಪು ಪಡೆದುಕೊಂಡಿದ್ದು ಅವರಿಂದಲೇ ಎಂದ ಅವರು ಕಾರ್ಮಿಕರಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹತ್ತಾರು ಯೋಜನೆ ರೂಪಿಸಿವೆ. ರೂ. 20,000ಕೋಟಿ ಆತ್ಮನಿರ್ಭರ ಪ್ಯಾಕೇಜ್ನಲ್ಲಿ ಕಾರ್ಮಿಕರಿಗೂ ಸವಲತ್ತು ನೀಡಲಾಗಿದೆ ಎಂದವರು ನುಡಿದರು.
ನಗರಸಭೆ ಅಧ್ಯಕ್ಷ ಜೀವಂಧರ ಜೈನ್ ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು. ಸಂಘದ ಗೌರವಾಧ್ಯಕ್ಷ ಲೋಕೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕ ಗಣಪತಿ ಹೆಗಡೆ, ಪುತ್ತೂರು ಎಂಜಿನಿಯರ್ಸ್ ಎಸೋಸಿಯೇಶನ್ ಅಧ್ಯಕ್ಷರಾದ ಅಕ್ಷಯ್ ಎಸ್.ಕೆ., ಬನ್ನೂರು ರೈತರ ಸೇವಾ ಸಂಘದ ನಿರ್ದೇಶಕ ಅಶ್ರಫ್ ಕಲ್ಲೇಗ, ಕಟ್ಟಡ ಕಾರ್ಮಿಕರ ಸಂಘದ ಕಾನೂನು ಸಲಹೆಗಾರರಾದ, ನ್ಯಾಯವಾದಿ ದೀಪಕ್ ಕುಮಾರ್, ಸಲಹೆಗಾರರಾದ ಕೇಶವ ಪೂಜಾರಿ ಬೆದ್ರಾಳ, ಕಾರ್ಯಾಧ್ಯಕ್ಷ ಪೌಲ್ ಡಿಸೋಜ, ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಬೆದ್ರಾಳ, ಖಜಾಂಚಿ ಬಶೀರ್ ಅಹ್ಮದ್, ಉಪಾಧ್ಯಕ್ಷ ರುಕ್ಮಯ ಗೌಡ ಉಪಸ್ಥಿತರಿದ್ದರು. ಗಾಯಕ ಚಂದ್ರಶೇಖರ ಹೆಗ್ಡೆ ಪುತ್ತೂರು ಪ್ರಾರ್ಥಿಸಿದರು. ಭಾರತ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಇನಾಸ್ ವೇಗಸ್ ಸ್ವಾಗತಿಸಿದರು. ಸಂಘದ ಅಶ್ರಫ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.