- ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯ: ಸಂಜೀವ ಮಠಂದೂರು
ವಿಟ್ಲ: ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇಲಾಖೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿದಾಗ ಜನರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಪುತ್ತೂರು ಶಾಸಕರಾದ ಸಂಜೀವ ಮಠಂದೂರುರವರು ಹೇಳಿದರು.
ಅವರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ೨೩.೮೪ ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ವಿಟ್ಲ ಕಂದಾಯ ಇಲಾಖೆಯ ನೂತನ ನಾಡಕಚೇರಿ ಕಟ್ಟಡಕ್ಕೆ ಮೇ.೨೩ರಂದು ಶಿಲಾನ್ಯಾಸ ನೆರವೇರಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದ.ಕ ಜಿಲ್ಲೆಯಲ್ಲಿ ವಿಟ್ಲ ಮತ್ತು ಉಪ್ಪಿನಂಗಡಿಗೆ ಎರಡು ನಾಡಕಚೇರಿ ಕಟ್ಟಡಕ್ಕೆ ಅನುದಾನ ಮಂಜೂರಾಗಿದೆ. ಜಿಲ್ಲೆಗೆ ನಾಲ್ಕು ರೈತ ಸಂಪರ್ಕ ಕೇಂದ್ರ ಬಂದಿದ್ದು, ಅದರಲ್ಲಿ ಒಂದು ವಿಟ್ಲದಲ್ಲಿ ನಿರ್ಮಾಣಗೊಳ್ಳುತ್ತಿದೆ. ಕೃಷಿ ಇಲಾಖೆ, ಕಂದಾಯ ಇಲಾಖೆಗೆ ಪರಿಪೂರ್ಣ ಕಟ್ಟಡ ಇದ್ದಾಗ ಮಾತ್ರ ಜನರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ವಿಟ್ಲ ತಾಲೂಕು ಕೇಂದ್ರ ಆಗುವ ನಿಟ್ಟಿನಲ್ಲಿ ಪೂರಕವಾಗಿ ಸುಸಜ್ಜಿತ ನಾಡಕಚೇರಿ ನಿರ್ಮಾಣಗೊಳ್ಳುತ್ತಿದೆ ಎಂದರು.
ಬಂಟ್ವಾಳ ತಹಶೀಲ್ದಾರ್ ಡಾ. ಸ್ಮಿತಾ, ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲ್ಬವಿ, ವಿಟ್ಲ ಕಂದಾಯ ನಿರೀಕ್ಷಕ ಪ್ರಶಾಂತ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಅರುಣ್ ಎಂ ವಿಟ್ಲ, ರವಿಪ್ರಕಾಶ್, ವಸಂತ, ಕರುಣಾಕರ ನಾಯ್ತೋಟ್ಟು, ಕೃಷ್ಣ ಎನ್, ಹರೀಶ್ ಸಿ.ಎಚ್, ಅಶೋಕ್ ಕುಮಾರ್ ಶೆಟ್ಟಿ, ಜಯಂತ, ಸಂಗೀತ ಪಾಣೆಮಜಲು, ರಕ್ಷಿತಾ, ವಿಜಯಲಕ್ಷ್ಮೀ, ಮಾಜಿ ಸದಸ್ಯರಾದ ಉಷಾಕೃಷ್ಣಪ್ಪ, ಚಂದ್ರಕಾಂತಿ ಶೆಟ್ಟಿ, ಮಂಜುನಾಥ ಕಲ್ಲಕಟ್ಟ, ಲೋಕನಾಥ ಕೊಲ್ಯ, ಬಿಜೆಪಿ ನಗರ ಅಧ್ಯಕ್ಷ ಮೋಹನದಾಸ ಉಕ್ಕುಡ, ಹರಿಪ್ರಸಾದ್ ಯಾದವ್, ಮಾಣಿಲ ಗ್ರಾ.ಪಂ. ಉಪಾಧ್ಯಕ್ಷರಾದ ರಾಜೇಶ್ ಕುಮಾರ್ ಬಾಳೆಕಲ್ಲು, ವಿಟ್ಲ ಹೋಬಳಿಯ ವಿವಿಧ ಗ್ರಾಮದ ಗ್ರಾಮಕರಣಿಕರು, ಸಹಾಯಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.