ಬೆಳ್ತಂಗಡಿ: ಯಾವುದೇ ಸೌಹಾರ್ದ ಸಂಘವು ಮುನ್ನಡೆಯಲು ಸಂಘದ ಸದಸ್ಯರ ತಾಳ್ಮೆ, ಸಮಯ ಪ್ರಜ್ಞೆ ಅತ್ಯವಶ್ಯ. ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಕಳೆದ ನಾಲ್ಕು ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿದ್ದು ಇದೇ ಡಿಸೆಂಬರ್ ಒಳಗಾಗಿ ಅರಸಿನಮಕ್ಕಿಯಲ್ಲಿ ಸುಸಜ್ಜಿತ ನೂತನ ಶಾಖೆಯನ್ನು ತೆರೆಯಲು ಮುಂದಾಗಿದ್ದೇವೆ ಎಂದು ಅಧ್ಯಕ್ಷ ರಂಜನ್ ಜಿ. ಗೌಡ ತಿಳಿಸಿದರು.
ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಸೆ.11 ರಂದು ನಡೆದ ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 31 ಲಕ್ಷ ರೂ. ನಿವ್ವಳ ಲಾಭದಿಂದ ಮುನ್ನಡೆಯುತ್ತಿದ್ದು, ಐದನೇ ವರ್ಷಕ್ಕೆ 50 ಲಕ್ಷ ರೂ. ಲಾಭ ಗಳಿಸುವ ನಿರೀಕ್ಷೆಯಿದೆ. ಸಂಘಕ್ಕೆ ಸ್ವಂತ ಕಟ್ಟಡ ನಿವೀಶನ ರಚಿಸುವ ಸಲುವಾಗಿ ಸಮುದಾಯ ಬಾಂಧವರು ಸಹಕರಿಸಿರುವುದನ್ನು ಸ್ಮರಿಸಿದ ಅವರು ಉಜಿರೆಯಲ್ಲಿ 1 ಎಕ್ರೆ ಭೂಮಿ ಖರೀದಿಸಿ ಭವ್ಯ ಭವನ ನಿರ್ಮಾಣದ ಕನಸ್ಸು ಹೊತ್ತಿದ್ದೇವೆ. ಸಮುದಾಯದ ಒಗ್ಗಟ್ಟಿನಿಂದ ಮುನ್ನಡೆದರೆ ದೂರದೃಷ್ಟಿ ಯೋಜನೆಗಳ ಐತಿಹಾಸಿಕ ಕ್ಷಣಕ್ಕೆ ಕಾರಣವಾಗಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಇಚ್ಚಿಲ ಸುಂದರ ಗೌಡ, ನಿರ್ದೇಶಕರು ಹಾಗೂ ಮಾಜಿ ಸಚಿವರಾದ ಕೆ.ಗಂಗಾಧರ ಗೌಡ, ಇತರ ನಿರ್ದೇಶಕರಾದ ದಾಮೋದರ ಗೌಡ ಸುರುಳಿ, ಜಯಂತ ಗೌಡ ಗುರಿಪಳ್ಳ, ಗಂಗಾಧರ ಗೌಡ, ಶಿವಕಾಂತ ಗೌಡ, ಬಾಲಕೃಷ್ಣ ಗೌಡ ಕೇರಿಮಾರು, ಕೇಶವ ಗೌಡ ಪಿ., ಚೇತನಾ ಗೌಡ ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ ವರದಿ ವಾಚಿಸಿದರು. ನಿರ್ದೇಶಕರಾದ ಎನ್.ಲಕ್ಷ್ಮಣ ಗೌಡ ಸ್ವಾಗತಿಸಿದರು. ನಿರ್ದೇಶಕಿ ಸರೋಜಿನಿ ಗೌಡ ವಂದಿಸಿದರು. ಮುಖ್ಯ ಸಿಬ್ಬಂದಿ ನಿತಿನ್ ಗೌಡ ಸುರುಳಿ ನಿರೂಪಿಸಿದರು. ಸದಸ್ಯರಾದ ಮಮತಾ, ಬಾಲಕೃಷ್ಣ ಗೌಡ ಕಲ್ಲಾಜೆ ಸಹಕರಿಸಿದರು.