ಪುತ್ತೂರು: ಹರಕೆ ರೂಪದ ಅಗೇಲು ಸೇವೆಗೆ ಹೆಸರು ಪಡೆದ ಬೆಟ್ಟಂಪಾಡಿ ಗ್ರಾಮದ ಇರ್ದೆ ಶ್ರೀ ಉಳ್ಳಾಕುಲು ಮೈಸಂದಾಯ ಶ್ರೀ ಸತ್ಯದೇವತೆ ಕಲ್ಕುಡ ದೈವಸ್ಥಾನದಲ್ಲಿ ಮಾ.3ರಂದು ದೈವಗಳ ನೇಮೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಂದ ಅಚ್ಚುಕಟ್ಟಾಗಿ ನಡೆಯಿತು. ಬೆಳಿಗ್ಗೆ ನಾಗದೇವರ ತಂಬಿಲ, ಗಣಹೋಮ, ಉಳ್ಳಾಕುಲು ಮೈಸಂದಾಯ, ಪೊಟ್ಟಭೂತ ನೇಮೋತ್ಸವ ನಡೆಯಿತು.
ಸಂಜೆ ವರ್ಣರ ಪಂಜುರ್ಲಿ ಭಂಡಾರ ತೆಗೆದು ನೇಮೋತ್ಸವ, ರಾತ್ರಿ ಕಲ್ಲುರ್ಟಿ, ಕಲ್ಕುಡ, ಗುಳಿಗ, ಧೂಮಾವತಿ , ಪಂಜುರ್ಲಿ ದೈವಗಳ ಭಂಡಾರ ತೆಗೆದು ನೇಮೋತ್ಸವ ನಡೆಯಿತು. ಕಾರ್ಯಕ್ರಮಕ್ಕೆ ಜಾತಿ, ಮತ ಭೇದವಿಲ್ಲದೆ ನೂರಾರು ಮಂದಿ ಭಾಗವಹಿಸಿ ದೈವದ ಗಂಧಪ್ರಸಾದ ಹಾಗೂ ಅನ್ನ ಪ್ರಸಾದ ಸ್ವೀಕರಿಸಿದರು. ಆಡಳಿತ ಮೊಕ್ತೇಸರ ರಾಮಣ್ಣ ಪೂಜಾರಿ ಇರ್ದೆ ಇವರ ಮುಂದಾಳತ್ವದಲ್ಲಿ ಕುಟುಂಬಸ್ಥರು, ಗ್ರಾಮಸ್ಥರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಆಕರ್ಷಕ ದ್ವಾರಗಳು, ತಳಿರು ತೋರಣಗಳು, ವಿದ್ಯುತ್ ದೀಪಗಳ ಅಲಂಕಾರದಿಂದ ಶ್ರೀಕ್ಷೇತ್ರ ಆಕರ್ಷಣಿಯವಾಗಿ ಕಂಗೊಳಿಸುತಿತ್ತು. ಬಾಲಕೃಷ್ಣ ಇರ್ದೆ, ಶಶಿಕುಮಾರ್ ಇರ್ದೆ, ವಿನಯ ಕುಮಾರ್ ಇರ್ದೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ಹಲವಾರು ಗಣ್ಯರು,ಭಕ್ತಾದಿಗಳು ಉಪಸ್ಥಿತರಿದ್ದರು.